ಜೋಧಪುರ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ವಾಯುಪಡೆಯ ಯುದ್ಧ ವಿಮಾನ ಸುಖೋಯ್–30 ಎಂಕೆಐನಲ್ಲಿ ಬುಧವಾರ ಹಾರಾಟ ನಡೆಸಿದರು.
ಜೋಧಪುರ ವಾಯುನೆಲೆಯಲ್ಲಿ ಪೈಲಟ್ಗಳ ತರಬೇತಿಗೆ ಎಂದು ಮೀಸಲಿರಿಸಿರುವ ಯುದ್ಧವಿಮಾನದ ಹಿಂಬದಿಯ ಸೀಟಿನಲ್ಲಿ ಪೈಲಟ್ಗಳ ಜಿ–ಸೂಟ್ ತೊಟ್ಟು ಕುಳಿತಿದ್ದ ಅವರು 45 ನಿಮಿಷ ಹಾರಾಟ ನಡೆಸಿದರು.
ಯುದ್ಧವಿಮಾನದಲ್ಲಿ (ಮಿಗ್–21) ಹಾರಾಟ ನಡೆಸಿದ ಏಕೈಕ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆ ಜಾರ್ಜ್ ಫರ್ನಾಂಡಿಸ್ ಅವರದ್ದಾಗಿತ್ತು. ಸುಖೋಯ್–30 ಎಂಕೆಐನಲ್ಲಿ ಮಾಜಿ ರಾಷ್ಟ್ರಪತಿಗಳಾದ ಎ.ಪಿ.ಜೆ.ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್, ಉದ್ಯಮಿ ರತನ್ ಟಾಟಾ ಹಾರಾಟ ನಡೆಸಿದ್ದರು. ಹಾರಾಟಕ್ಕೂ ಮುನ್ನ ನಿರ್ಮಲಾ ಅವರು ಪೈಲಟ್ಗಳು, ಇತರ ಸಿಬ್ಬಂದಿಯನ್ನು ಭೇಟಿಯಾದರು. ನಂತರ ಸುಖೋಯ್–30 ಯುದ್ಧವಿಮಾನದ ಬಗ್ಗೆ ತಜ್ಞರು ಮಾಹಿತಿ ನೀಡಿದರು.
ವಿಮಾನದ ಪೈಲಟ್ ಆಗಿದ್ದ ಕ್ಯಾಪ್ಟನ್ ಸುಮಿತ್ ಗರ್ಗ್ ಸುಖೋಯ್ನಲ್ಲಿ ಹಲವು ತಿರುವುಗಳು ಮತ್ತು ಏರಿಳಿತಗಳ ಪ್ರಾತ್ಯಕ್ಷಿಕೆ ನೀಡಿದರು. ಕ್ಯಾಪ್ಟನ್ ಸುಮಿತ್ ಅವರ ತಂಡದ ಇತರ ಪೈಲಟ್ಗಳು ತಮ್ಮ ವಿಮಾನಗಳಲ್ಲಿ ಕಸರತ್ತುಗಳನ್ನು ಪ್ರದರ್ಶಿಸಿ, ಅವುಗಳ ಸಾಮರ್ಥ್ಯದ ಪ್ರಾತ್ಯಕ್ಷಿಕೆ ನೀಡಿದರು.
* ಇಂತಹ ಅಭೂತಪೂರ್ವ ಅನುಭವ ನೀಡಿದ್ದಕ್ಕೆ ಧನ್ಯವಾದಗಳು. ಇದಕ್ಕಾಗಿ ನಾನು ಹೆಮ್ಮೆ ಪಡುತ್ತೇನೆ. ನಮ್ಮ ವಾಯುಪಡೆಯ ಸಾಮರ್ಥ್ಯ, ಸಮರಭ್ಯಾಸಗಳು, ಯುದ್ಧ ಸನ್ನದ್ಧತೆ ಮತ್ತು ತುರ್ತು ಸಂದರ್ಭದಗಳಲ್ಲಿ ಅವರು ಎಷ್ಟು ತ್ವರಿತವಾಗಿ ಸ್ಪಂದಿಸಬಲ್ಲರು ಎಂಬುದರ ಬಗ್ಗೆ ಈ ಹಾರಾಟ ನನ್ನ ಕಣ್ಣು ತೆರೆಸಿತು. ಇದನ್ನು ಮರೆಯಲು ಸಾಧ್ಯವೇ ಇಲ್ಲ
– ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.