ನವದೆಹಲಿ: ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ಅವರನ್ನು ನಾಲ್ವರು ಹಿರಿಯ ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್, ರಂಜನ್ ಗೊಗೋಯ್, ಮದನ್ ಬಿ. ಲೋಕೂರ್ ಮತ್ತು ಕುರಿಯನ್ ಜೋಸೆಫ್ ಗುರುವಾರ ಭೇಟಿಯಾದರು.
ಸುಪ್ರೀಂ ಕೋರ್ಟ್ನ ಆಡಳಿತ ನಿರ್ವಹಣೆ, ವಿವಿಧ ಪೀಠಗಳಿಗೆ ಪ್ರಕರಣಗಳ ಹಂಚಿಕೆಯಂತಹ ವಿಚಾರಗಳಲ್ಲಿ ಸಿಜೆಐ ವಿರುದ್ಧ ಈ ನಾಲ್ವರು ನ್ಯಾಯಮೂರ್ತಿಗಳು ಕಳೆದ ವಾರ ಬಹಿರಂಗ ಆರೋಪ ಮಾಡಿದ್ದರು. ಗುರುವಾರದ ಸಭೆಯಲ್ಲಿ ಈ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೂರಗಾಮಿ ಪರಿಣಾಮಗಳುಲ್ಲ ಪ್ರಕರಣಗಳನ್ನು ಪೀಠಗಳಿಗೆ ಹಂಚಿಕೆ ಮಾಡುವುದಕ್ಕೆ ನೀಲನಕ್ಷೆಯೊಂದನ್ನು ಸಿದ್ಧಪಡಿಸಬೇಕು ಎಂದು ಈ ನಾಲ್ವರು ನ್ಯಾಯಮೂರ್ತಿಗಳು ಸಿಜೆಐ ಅವರನ್ನು ಒತ್ತಾಯಿಸಿದ್ದಾರೆ. ಮಾತುಕತೆ ಸುಮಾರು 30 ನಿಮಿಷ ನಡೆದಿದೆ.
ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎನ್.ವಿ. ರಮಣ, ಡಿ.ವೈ. ಚಂದ್ರಚೂಡ ಮತ್ತು ಯು.ಯು. ಲಲಿತ್ ಅವರೂ ಈ ಮಾತುಕತೆಯ ಸಂದರ್ಭದಲ್ಲಿ ಹಾಜರಿದ್ದರು ಎಂದು ಮೂಲಗಳು ಹೇಳಿವೆ. ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಇದೇ 12ರಂದು ಮಾಧ್ಯಮಗೋಷ್ಠಿ ನಡೆಸಿ ತಮ್ಮ ಅತೃಪ್ತಿ ಹೊರಹಾಕಿದ ಬಳಿಕ ಅವರು ಮತ್ತು ಸಿಜೆಐ ನಡುವೆ ನಡೆದ ಎರಡನೇ ಸಭೆ ಇದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.