ADVERTISEMENT

ಎಎಪಿಯಿಂದ ಒಳಸಂಚು: ಕಾಂಗ್ರೆಸ್‌ ಆರೋಪ

ಕೇಜ್ರಿವಾಲ್‌ ಪಕ್ಷಕ್ಕೆ ಬಿಜೆಪಿ, ಚುನಾವಣಾ ಆಯೋಗ ನೆರವು: ಮಾಕೆನ್‌

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST
ಅಜಯ್‌ ಮಾಕೆನ್‌
ಅಜಯ್‌ ಮಾಕೆನ್‌   

ನವದೆಹಲಿ: ಲಾಭದಾಯಕ ಹುದ್ದೆ ನಿಯಮ ಉಲ್ಲಂಘಿಸಿದ ಪ್ರಕರಣದಲ್ಲಿ ತನ್ನನ್ನು ಬಲಿಪಶು ಮಾಡಲಾಗಿದೆ ಎಂದು ಹೇಳಿಕೊಳ್ಳುತ್ತಿರುವ ಎಎಪಿ ವಿರುದ್ಧ ಕಾಂಗ್ರೆಸ್‌ ಹರಿಹಾಯ್ದಿದೆ.

ಕಳೆದ ತಿಂಗಳು ನಡೆದಿದ್ದ ರಾಜ್ಯಸಭಾ ಚುನಾವಣೆಯ ನಂತರವಷ್ಟೇ ತನ್ನ 20 ಶಾಸಕರು ಅನರ್ಹವಾಗುವಂತೆ ನೋಡಿಕೊಳ್ಳಲು ಎಎಪಿಯು ಬಿಜೆಪಿಯೊಂದಿಗೆ ಒಳಸಂಚು ನಡೆಸಿದೆ ಎಂದು ದೆಹಲಿ ಕಾಂಗ್ರೆಸ್‌ ಮುಖ್ಯಸ್ಥ ಅಜಯ್‌ ಮಾಕೆನ್‌ ಆರೋಪಿಸಿದ್ದಾರೆ.

‘ಡಿಸೆಂಬರ್‌ 22ರ ನಂತರ‌ 20 ಶಾಸಕರು ಅನರ್ಹಗೊಂಡಿದ್ದರೆ ಅವರು ರಾಜ್ಯಸಭಾ ಚುನಾವಣೆಯಲ್ಲಿ ಮತ ಹಾಕಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಮಾಕೆನ್‌ ಹೇಳಿದ್ದಾರೆ.

ADVERTISEMENT

ಇದಕ್ಕೆ ಬಿಜೆಪಿ ಮತ್ತು ಚುನಾವಣಾ ಆಯೋಗ ಎಎಪಿಗೆ ನೆರವಾಗಿವೆ ಎಂದು ಅವರು ಆರೋಪಿಸಿದ್ದಾರೆ.

‘ರಾಜ್ಯಸಭೆ ಚುನಾವಣೆಗೆ ಮೂವರಿಗೆ ಟಿಕೆಟ್ ನೀಡಿದ್ದ ವಿಚಾರದಲ್ಲಿ ಎಎಪಿಯಲ್ಲಿ ಅಸಮಾಧಾನ ಇತ್ತು. ಒಂದು ವೇಳೆ ಮೊದಲೇ ಶಾಸಕರು ಅನರ್ಹಗೊಂಡಿದ್ದರೆ ಚುನಾವಣೆ ಸಂದರ್ಭದಲ್ಲಿ ಎಎಪಿ ಹೋಳಾಗುತ್ತಿತ್ತು’ ಎಂದು ಅವರು ಹೇಳಿದ್ದಾರೆ.

ಚುನಾವಣಾ ಆಯೋಗ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ ಎಂಬ ಎಎಪಿ ಆರೋಪ ತಳ್ಳಿ ಹಾಕಿದ ಅವರು, ಆಯೋಗವು ಒಂದು ದಿನದಲ್ಲಿ ಈ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

‘ನಾವು 2016ರ ಜೂನ್‌ನಲ್ಲೇ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದೆವು. ಆಯೋಗ 11 ದಿನಗಳ ಕಾಲ ಎಎಪಿ ಶಾಸಕರ ವಾದ ಆಲಿಸಿತ್ತು’ ಎಂದು ಹೇಳಿದ್ದಾರೆ.

ಆಯೋಗದಲ್ಲಿ ನಡೆಯುತ್ತಿದ್ದ ವಿಚಾರಣಾ ಪ್ರಕ್ರಿಯೆಯನ್ನು ವಿಳಂಬ ಮಾಡಲು ಎಎಪಿ ಯತ್ನಿಸಿತ್ತು ಎಂದು ಮಾಕೆನ್‌ ದೂರಿದ್ದಾರೆ.

ಸತ್ಯಕ್ಕೆ ಗೆಲುವಾಗಿದೆ: ಬಿಜೆಪಿ
ಭೋಪಾಲ್‌:
ಎಎಪಿಯ 20 ಶಾಸಕರನ್ನು ಅನರ್ಹಗೊಳಿಸಿರುವುದನ್ನು ಸ್ವಾಗತಿಸಿರುವ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್‌ ತಿವಾರಿ, ‘ಸತ್ಯಕ್ಕೆ ಜಯವಾಗಿದೆ’ ಎಂದು ಹೇಳಿದ್ದಾರೆ.

‘20 ತಿಂಗಳ ಹಿಂದೆಯೇ ಇದು ನಡೆದಿದ್ದರೆ, ದೆಹಲಿ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕುದುರೆ ವ್ಯಾಪಾರ ನಡೆಯುತ್ತಿರಲಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.