ನವದೆಹಲಿ: ‘ಕೈಕೊಡುತ್ತಿದ್ದ ಆರೋಗ್ಯದ ಕಾರಣದಿಂದ 2012ರಲ್ಲಿ ದೆಹಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ, ಅದೇ ಸಂದರ್ಭದಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣ ನಿಭಾಯಿಸಲು ಅಧಿಕಾರದಲ್ಲಿ ಮುಂದುವರೆಯಬೇಕಾಯಿತು’ ಎಂದು ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಹೇಳಿದ್ದಾರೆ.
‘ನಿರ್ಭಯಾ ಪ್ರಕರಣ ಸಂದರ್ಭದಲ್ಲಿ ನನ್ನ ಮೇಲಿದ್ದ ಒತ್ತಡ, ಅನುಭವಿಸುತ್ತಿದ್ದ ಮಾನಸಿಕ ವೇತನೆ ನೋಡದೆ ಕುಟುಂಬ ಸದಸ್ಯರು ರಾಜೀನಾಮೆ ನೀಡುವಂತೆ ಸಲಹೆ ಮಾಡಿದ್ದರು. ರಾಜೀನಾಮೆ ನೀಡಿದರೆ ಯುದ್ಧಭೂಮಿಯಿಂದ ಹೆದರಿ ಓಡಿ ಹೋದ ಹೇಡಿ ಎಂಬ ಅಪವಾದ ಬರುತಿತ್ತು. ಅನಿವಾರ್ಯವಾಗಿ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಬೇಕಾಯಿತು’ ಎಂದು ಅವರು ಸ್ಮರಿಸಿಕೊಂಡಿದ್ದಾರೆ.
ಮೂರು ಅವಧಿಗೆ ದೆಹಲಿ ಮುಖ್ಯಮಂತ್ರಿಯಾಗಿದ್ದ ಅವರು ತಮ್ಮ ಅನುಭವಗಳನ್ನು ಇತ್ತೀಚೆಗೆ ಬಿಡುಗಡೆಯಾದ ‘ಸಿಟಿಜನ್ ದೆಹಲಿ: ಮೈ ಟೈಮ್ಸ್, ಮೈ ಲೈಫ್’ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ.
‘ಮುಖ್ಯಮಂತ್ರಿಯಾಗಿ 15 ವರ್ಷ ನಾನು ಅನೇಕ ಉತ್ತಮ ಕೆಲಸ ಮಾಡಿದರೂ, ಕೇಂದ್ರ ಯುಪಿಎ ಸರ್ಕಾರದ ಆಡಳಿತ ವಿರೋಧಿ ಅಲೆಯಲ್ಲಿ ನಾವೂ ಸೋಲಬೇಕಾಯಿತು ’ ಎಂದು ಅವರು ವಿಶ್ಲೇಷಿಸಿದ್ದಾರೆ.
ತಮ್ಮದಲ್ಲದ ತಪ್ಪಿಗೆ ತಾವು ಬೆಲೆ ತೆರಬೇಕಾಯಿತು ಎಂದು ಶೀಲಾ ದೀಕ್ಷಿತ್ ಪಶ್ಚಾತಾಪ ಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.