ನವದೆಹಲಿ: 2008ರ ಗುಜರಾತ್ ಸರಣಿ ಸ್ಫೋಟ ಪ್ರಕರಣದ ಶಂಕಿತ ಸಂಚುಕೋರನೊಬ್ಬನನ್ನು ಸೋಮವಾರ ಬಂಧಿಸಲಾಗಿದೆ.
ದೆಹಲಿ ಪೊಲೀಸ್ ಇಲಾಖೆಯ ಭಯೋತ್ಪಾದಕ ನಿಗ್ರಹ ವಿಶೇಷ ದಳ ಘಾಜಿಯಾಪುರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಇಂಡಿಯನ್ ಮುಜಾಹಿದ್ದೀನ್(ಐಎಂ) ಸಹ ಸ್ಥಾಪಕ ಅಬ್ದುಲ್ಸುಭಾನ್ ಖುರೇಷಿಯನ್ನು ಬಂಧಿಸಲಾಗಿದೆ. ಈತ ಸಿಮಿ ಜತೆಗೂ ಸಂಪರ್ಕ ಹೊಂದಿದ್ದ ಎಂದು ದೆಹಲಿ ವಿಶೇಷ ಘಟಕದ ಉಪಪೊಲೀಸ್ ಆಯುಕ್ತ ಪಿ.ಎಸ್. ಖುಷ್ವಾ ತಿಳಿಸಿದ್ದಾರೆ.
ನಕಲಿ ಗುರುತಿನ ಚೀಟಿ ಆಧರಿಸಿ ನೇಪಾಳದಲ್ಲಿ ವಾಸಿಸುತ್ತಿರುವ ಖುರೇಷಿ ಪರಿಚಿತನೊಬ್ಬನನ್ನು ಭೇಟಿ ಮಾಡಲು ಘಾಜಿಯಾಪುರಕ್ಕೆ ಬರುತ್ತಾನೆ ಎನ್ನುವ ಮಾಹಿತಿ ದೊರಕಿತ್ತು.
‘ಖುರೇಷಿ ಹಾಗೂ ಪೊಲೀಸರ ನಡುವೆ ದಾಳಿ ಪ್ರತಿದಾಳಿ ನಡೆದಿದೆ. ಆತನಿಂದ ಪಿಸ್ತೂಲು ಹಾಗೂ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯನ್ನು ಸಕ್ರಿಯಗೊಳಿಸಲು ಆತ ಯತ್ನಿಸುತ್ತಿದ್ದ’ ಎಂದು ಖುಷ್ವಾ ಹೇಳಿದ್ದಾರೆ.
ನ್ಯಾಯಾಲಯದ ಎದುರು ಹಾಜರುಪಡಿಸಿದ ನಂತರ ಆತನನ್ನು 14 ವಾರಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
ಮುಂಬೈನ ಖುರೇಷಿ ಬಾಂಬ್ ತಯಾರಕನಾಗುವ ಮೊದಲು ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ. ಮುಂಬೈ ಹಾಗೂ ಬೆಂಗಳೂರಿನಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಆತನ ಪಾತ್ರ ಇರುವುದಾಗಿ ತನಿಖೆ ವೇಳೆ ತಿಳಿದಿತ್ತು.
ಈತನ ಬಗ್ಗೆ ಸುಳಿವು ನೀಡಿದವರಿಗೆ ₹4 ಲಕ್ಷ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ ಘೋಷಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.