ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 56 ಇಂಚಿನ ಎದೆ ಏನಿದ್ದರು ಮುಸ್ಲಿಮರ ಮುಂದೆ ಮಾತ್ರ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವ್ಯಂಗ್ಯವಾಡಿದ್ದಾರೆ.
ಪದ್ಮಾವತ್ ಚಿತ್ರ ಪ್ರದರ್ಶನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಹಾಗೂ ರಜಪೂತ ಕರ್ಣಿಸೇನಾವನ್ನು ಉಲ್ಲೇಖಿಸಿ ಮಾತನಾಡಿದ ಒವೈಸಿ, ಬಿಜೆಪಿ ಪಕೋಡ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ
ಮೋದಿ ಹಾಗೂ ಅವರ ಪಕ್ಷ ಹಿಂಸಾ ಪ್ರವೃತ್ತಿಗಳನ್ನು ರತ್ನಗಂಬಳಿ ಹಾಕಿ ಸ್ವಾಗತಿಸುತ್ತಿದೆ. ಪ್ರತಿಭಟನಾಕಾರರು ಶಾಲಾ ಮಕ್ಕಳ ಮೇಲೆ ಹಲ್ಲೆ, ಆಸ್ತಿ–ಪಾಸ್ತಿ ನಾಶ ಮಾಡಿದ್ದಾರೆ. ಈ ಎಲ್ಲಾ ದುಷ್ಕೃತ್ಯಗಳಿಗೆ ಬಿಜೆಪಿ ಬೆಂಬಲ ನೀಡುತ್ತಿದೆ. ಇವರು ಸೌಮ್ಯವಾಗಿಯೇ ಪ್ರತಿಭಟನಾಕಾರರ ದೌರ್ಜನ್ಯಕ್ಕೆ ಶರಣಾಗಿದ್ದಾರೆ ಎಂದು ಹೇಳಿದ್ದಾರೆ.
ಮೋದಿ ಅವರು ಮುಸ್ಲಿಮರ ಬಗ್ಗೆ ಪೂರ್ವಾಗ್ರಹಪೀಡಿತರಾಗಿದ್ದಾರೆ. ಸಂಸತ್ತಿನಲ್ಲಿರುವ ಯಾವುದೇ ಮುಸ್ಲಿಂ ಸದಸ್ಯರನ್ನು, ಮುಸ್ಲಿಂ ಸಂಘಟನೆಯನ್ನು ಕೇಳದೆ ತ್ರಿವಳಿ ತಲಾಖ್ ಮಸೂದೆ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ಪದ್ಮಾವತಿ ಚಿತ್ರವನ್ನು ಪದ್ಮಾವತ್ ಎಂದು ಬದಲಾಯಿಸಿದ್ದಾರೆ. ಅದರಲ್ಲಿನ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಕೆಲವರನ್ನು ಸಂತೃಪ್ತಿಗೊಳಿಸುವ ಸಲುವಾಗಿ ಚಿತ್ರದಲ್ಲಿ ನಟಿಯ ತೊಳಲಾಟವನ್ನು ಮುಚ್ಚಿಹಾಕಲಾಗಿದೆ. ಇದು ಯಾವ ರೀತಿಯ ರಾಜಕೀಯ ಎಂದು ಪ್ರಶ್ನಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಸಂವಿಧಾನ ಹಾಗೂ ಅದರಲ್ಲಿನ ನಿಯಮ ಪಾಲನೆಗಳು ಮುಖ್ಯವಾಗಿಲ್ಲ ಎಂದು ಹೇಳಿದ್ದಾರೆ.
ವಿರೋಧ ಪಕ್ಷವನ್ನು ಗುರಿಯಾಗಿಸಿಕೊಂಡು ಎರಡು ದಿನಗಳ ಹಿಂದೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 'ವ್ಯಕ್ತಿಯೊಬ್ಬ ಪ್ರತಿದಿನ ಪಕೋಡಾ ಮಾರಾಟ ಮಾಡಿ ₹200 ಗಳಿಸುತ್ತಾನೆ ಎಂದಾದರೆ ಅದನ್ನು ಉದ್ಯೋಗ ಎಂದು ಪರಿಗಣಿಸಬೇಕೆ? ಬೇಡವೆ?' ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.