ADVERTISEMENT

‘ಭಾರತದ ನೋಟ ಪೂರ್ವದತ್ತ...’

ಆಸಿಯಾನ್‌ನ 10 ದೇಶಗಳ 27 ಪತ್ರಿಕೆಗಳಲ್ಲಿ ಪ್ರಧಾನಿ ಮೋದಿ ಲೇಖನ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 19:30 IST
Last Updated 26 ಜನವರಿ 2018, 19:30 IST
ಆಸಿಯಾನ್‌ ಶೃಂಗಸಭೆಗಾಗಿ ಭಾರತಕ್ಕೆ ಬಂದಿದ್ದ ವಿವಿಧ ರಾಷ್ಟ್ರಗಳ ಮುಖ್ಯಸ್ಥರ ಜೊತೆ ಪ್ರಧಾನಿ ಮೋದಿ.
ಆಸಿಯಾನ್‌ ಶೃಂಗಸಭೆಗಾಗಿ ಭಾರತಕ್ಕೆ ಬಂದಿದ್ದ ವಿವಿಧ ರಾಷ್ಟ್ರಗಳ ಮುಖ್ಯಸ್ಥರ ಜೊತೆ ಪ್ರಧಾನಿ ಮೋದಿ.   

ನವದೆಹಲಿ: ಭಾರತದ ಭವಿಷ್ಯಕ್ಕೆ ಇಂಡೊ–ಪೆಸಿಫಿಕ್‌ ಪ್ರದೇಶದ ಜತೆಗಿನ ನಂಟು ಅನಿವಾರ್ಯ ಎಂದು ದಕ್ಷಿಣ ಏಷ್ಯಾದ ಹತ್ತು ದೇಶಗಳ 27 ಪತ್ರಿಕೆಗಳಿಗೆ ಬರೆದ ಲೇಖನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಪೋಷಣೆಯ ಸೂರ್ಯೋದಯ ಮತ್ತು ಅವಕಾಶಗಳ ಬೆಳಕಿಗಾಗಿ ಭಾರತೀಯರು ಸದಾ ಪೂರ್ವದತ್ತ ನೋಡುತ್ತಾರೆ. ಹಿಂದಿನಂತೆ, ಈಗಲೂ ಭಾರತದ ಭವಿಷ್ಯ ಮತ್ತು ನಮ್ಮೆಲ್ಲರ ಸಮಾನ ಮುನ್ನಡೆಗೆ ಪೂರ್ವ ಅಥವಾ ಇಂಡೊ–ಪೆಸಿಫಿಕ್‌ ಪ್ರದೇಶ ಅನಿವಾರ್ಯವೇ ಆಗಿದೆ. ಈ ಎರಡರಲ್ಲೂ ಆಸಿಯಾನ್‌ ಮತ್ತು ಭಾರತದ ಸಹಭಾಗಿತ್ವ ಮಹತ್ವದ್ದಾಗಿದೆ’ ಎಂದು ಹತ್ತು ಭಾಷೆಗಳಲ್ಲಿ ಪ್ರಕಟವಾದ ಲೇಖನದಲ್ಲಿ ಹೇಳಿದ್ದಾರೆ.

ಇಂಡೊ–ಪೆಸಿಫಿಕ್‌ ಪ್ರದೇಶದ ಜತೆ ಸೇನಾ ನಂಟನ್ನು ವಿಸ್ತರಿಸುವ ದೀರ್ಘಾವಧಿ ಯೋಜನೆಯ ಸುಳಿವನ್ನು ಈ ಲೇಖನದಲ್ಲಿ ಪ್ರಧಾನಿ ನೀಡಿದ್ದಾರೆ. ಈ ಪ್ರದೇಶದ ಮೇಲೆ ತನ್ನ ಪ್ರಾಬಲ್ಯ ಹೇರಲು ಚೀನಾ ಪ್ರಯತ್ನಿಸುತ್ತಿರುವುದರಿಂದ ಭಾರತದ ಈ ಕಾರ್ಯತಂತ್ರ ಮಹತ್ವ ಪಡೆದುಕೊಂಡಿದೆ.  

ADVERTISEMENT

‘ಆಸಿಯಾನ್‌ ಮತ್ತು ಭಾರತ, ಇಂದು (ಶುಕ್ರವಾರ) ನವದೆಹಲಿಯಲ್ಲಿ ಭವಿಷ್ಯದ ಸಹಯಾನದ ಪ್ರತಿಜ್ಞೆ
ಯನ್ನು ನವೀಕರಿಸಿದೆ’ ಎಂದು ಮೋದಿ ಹೇಳಿದ್ದಾರೆ. ಆಸಿಯಾನ್‌ನ ಹತ್ತು ದೇಶಗಳ ಮುಖ್ಯಸ್ಥರು ಭಾರತದ 69ನೇ ಗಣರಾಜ್ಯೋತ್ಸವದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಸಂದರ್ಭವನ್ನು ಉಲ್ಲೇಖಿಸಿ ನರೇಂದ್ರ ಮೋದಿ ಹೀಗೆ ಬರೆದಿದ್ದಾರೆ.

‘ಭಾರತ ಮತ್ತು ಆಸಿಯಾನ್‌ ದೇಶಗಳ ನಡುವಣ ಸಂಬಂಧವು ಸ್ಪರ್ಧೆ ಮತ್ತು ಹಕ್ಕು ಸಾಧನೆಯಿಂದ ಮುಕ್ತವಾಗಿದೆ’ ಎಂದು ಮೋದಿ ಹೇಳಿದ್ದಾರೆ. ‘ಭವಿಷ್ಯದೆಡೆಗೆ ನಾವು ಸಮಾನ ದೃಷ್ಟಿಕೋನ ಹೊಂದಿದ್ದೇವೆ; ಎಲ್ಲರ ಒಳಗೊಳ್ಳುವಿಕೆ ಮತ್ತು ಸಮನ್ವಯದ ಬದ್ಧತೆ, ಗಾತ್ರವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲ ದೇಶಗಳ ಸಾರ್ವಭೌಮತ್ವದ ಮೇಲೆ ನಂಬಿಕೆ, ವಾಣಿಜ್ಯ ಮತ್ತು ಇತರ ಸಂಬಂಧಕ್ಕೆ ಮುಕ್ತ ಬೆಂಬಲದ ತಳಹದಿಯಲ್ಲಿ ಈ ನಂಟು ನಿಂತಿದೆ’ ಎಂದು ಮೋದಿ ಬರೆದಿದ್ದಾರೆ.

ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಸಿಯಾನ್‌ನ ಹತ್ತು ಮುಖಂಡರನ್ನು ಆಹ್ವಾನಿಸಿದ್ದೇ ದಕ್ಷಿಣ ಏಷ್ಯಾ ಪ್ರದೇಶದ ಜತೆಗಿನ ಸಂಬಂಧವನ್ನು ಗಟ್ಟಿಗೊಳಿಸುವತ್ತ ಬಲವಾದ ಹೆಜ್ಜೆ ಇರಿಸಿದ್ದರ ಸಂಕೇತವಾಗಿದೆ. ಆಸಿಯಾನ್‌ ಪ್ರದೇಶವನ್ನು ಚೀನಾದ ಹಿತ್ತಿಲು ಎಂದೇ ಪರಿಗಣಿಸಲಾಗುತ್ತದೆ.

‘ಹಂಚಿತ ಮೌಲ್ಯಗಳು, ಸಮಾನ ಭವಿಷ್ಯ’ ಎಂಬ ಶೀರ್ಷಿಕೆಯ ಲೇಖನ ಇಂಗ್ಲಿಷ್‌, ಕಾಂಬೋಡಿಯಾ, ಬಹಾಸ ಇಂಡೋನೇಷ್ಯಾ, ಬಹಾಸ ಮಲಯ್‌, ವಿಯೆಟ್ನಾಮಿ, ಬರ್ಮೀ, ಲಾವೊ, ಮ್ಯಾಂಡರಿನ್‌ ಮತ್ತು ತಮಿಳು ಭಾಷೆಯಲ್ಲಿ ಪ್ರಕಟವಾಗಿದೆ.

ಆಸಿಯಾನ್‌ ಜತೆಗೆ ಭಾರತದ ಸಂಬಂಧದ 25ನೇ ವರ್ಷದ ನೆನಪಿಗೆ ನಡೆದ ಶೃಂಗ ಸಭೆಯ ವಿಷಯವೂ ‘ಹಂಚಿತ ಮೌಲ್ಯಗಳು, ಸಮಾನ ಭವಿಷ್ಯ’ ಎಂಬುದೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.