ಮುಂಬೈ : 2008ರ ನವೆಂಬರ್ 26ರಂದು (26/11) ನಡೆದಿದ್ದ ಮುಂಬೈ ದಾಳಿ ವೇಳೆ ಹುತಾತ್ಮರಾಗಿದ್ದ ಭಯೋತ್ಪಾದನಾ ನಿಗ್ರಹ ದಳದ ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಸಾವಿನ ತನಿಖೆಗೆ ಆದೇಶಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.
ಈ ಸಾವಿನ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಕೋರಿ ಬಿಹಾರ ಮಾಜಿ ಶಾಸಕ ರಾಧಾಕಾಂತ್ ಯಾದವ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಜಿ. ಧರ್ಮಾಧಿಕಾರಿ ನೇತೃತ್ವದ ಪೀಠ ವಜಾ ಮಾಡಿದೆ.
‘ಉಗ್ರರಾದ ಅಜ್ಮಲ್ ಕಸಬ್ ಹಾಗೂ ಅಬು ಇಸ್ಮಾಯಿಲ್ ಅವರಿಂದ ಹೇಮಂತ್ ಹತ್ಯೆಯಾಗಿಲ್ಲ, ಬದಲಿಗೆ ಬಲಪಂಥೀಯ ಗುಂಪಿನಿಂದ ಹತ್ಯೆಯಾಗಿದ್ದಾರೆ. 2008ರಲ್ಲಿ ಸಂಭವಿಸಿದ್ದ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿನವ್ ಭರತ್ ಸೇರಿದಂತೆ ಹಲವು ಬಲಪಂಥೀಯ ಸಂಘಟನೆಯ ಸದಸ್ಯರನ್ನು ಹೇಮಂತ್ ಬಂಧಿಸಿದ್ದರು. ಈ ಸಿಟ್ಟಿನಿಂದ ಅವರನ್ನು ಹತ್ಯೆ ಮಾಡಲಾಗಿದೆ’ ಎಂದು ದೂರಿ ಯಾದವ್ 2010ರಲ್ಲಿ ಅರ್ಜಿ ಸಲ್ಲಿಸಿದ್ದರು.
‘ಈ ಅರ್ಜಿ ಇತ್ಯರ್ಥಕ್ಕೆ ಬಾಕಿ ಇದ್ದ ಈಗಾಗಲೇ ಏಳುವರ್ಷಗಳ ಮೇಲಾಗಿದೆ. ಆದ್ದರಿಂದ ವಿಚಾರಣೆ ನಡೆಸಲು ಏನೂ ಉಳಿದಿಲ್ಲ. ತನಿಖೆಗೆ ಆದೇಶಿಸಲು ಈಗ ಸಾಧ್ಯವಿಲ್ಲ’ ಎಂದು ಹೇಳಿದ ಪೀಠ ಅರ್ಜಿಯನ್ನು ಇತ್ಯರ್ಥಗೊಳಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.