ಚೆನ್ನೈ : ಮಹಾತ್ಮ ಗಾಂಧಿ ಅವರ ಹತ್ಯೆಯಾದಾಗ ಅವರು ‘ಹೇ ರಾಮ್’ ಎಂದು ಹೇಳಿರಲಿಲ್ಲ ಎಂದು 2006ರಲ್ಲಿ ಹೇಳಿಕೆ ನೀಡಿದ್ದ ಗಾಂಧಿ ಅವರ ಆಪ್ತ ಸಹಾಯಕರಾಗಿದ್ದ ವೆಂಕಿಟ ಕಲ್ಯಾಣಂ ಈಗ ತಮ್ಮ ಹೇಳಿಕೆ ಬದಲಿಸಿದ್ದಾರೆ.
‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿತ್ತು’ ಎಂದು ಕಲ್ಯಾಣಂ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
‘ಗಾಂಧೀಜಿ ‘ಹೇ ರಾಮ್’ ಎಂದು ಹೇಳಿರಲಿಲ್ಲ ಎಂದು ನಾನು ಹೇಳಿಯೇ ಇಲ್ಲ. ಗಾಂಧಿ ಅವರು ‘ಹೇ ರಾಮ್’ ಎಂದು ಹೇಳಿದ್ದು ಕೇಳಿಸಿರಲಿಲ್ಲ ಎಂದಷ್ಟೇ ನಾನು ಹೇಳಿದ್ದೆ. ಗಾಂಧಿ ಅವರಿಗೆ ಗುಂಡು ಬಿದ್ದಾಗ ಎಲ್ಲರೂ ಕೂಗಲಾರಂಭಿಸಿದರು. ಆ ಗದ್ದಲದಲ್ಲಿ ನನಗೆ ಏನೂ ಕೇಳಿಸಲಿಲ್ಲ. ಅವರು ‘ಹೇ ರಾಮ್’ ಎಂದು ಹೇಳಿರಬಹುದು. ನನಗದು ಗೊತ್ತಿಲ್ಲ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
‘ಗೋಡ್ಸೆ ಗಾಂಧಿಯನ್ನು ಒಮ್ಮೆ ಮಾತ್ರ ಕೊಂದ. ಆದರೆ ರಾಜಕಾರಣಿಗಳು ಗಾಂಧಿಯನ್ನು ದಿನವೂ ಕೊಲ್ಲುತ್ತಿದ್ದಾರೆ’ ಎಂದೂ ಕಲ್ಯಾಣಂ ಬೇಸರ ವ್ಯಕ್ತಪಡಿಸಿದ್ದಾರೆ.
96 ವರ್ಷದ ವೆಂಕಿಟ ಅವರು 1943ರಿಂದ 1948ರಲ್ಲಿ ಗಾಂಧಿ ಹತ್ಯೆಯಾಗುವವರೆಗೂ ಅವರ ಆಪ್ತ ಸಹಾಯಕರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.