ಜೈಪುರ್: ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಪದ್ಮಾವತ್ ಚಿತ್ರದಲ್ಲಿ ರಜಪೂತರನ್ನು ವೈಭವೀಕರಿಸಲಾಗಿದೆ. ಹಾಗಾಗಿ ಚಿತ್ರದ ವಿರುದ್ದ ತಾವು ನಡೆಸುತ್ತಿದ್ದ ಪ್ರತಿಭಟನೆಯನ್ನು ನಿಲ್ಲಿಸಿದ್ದೇವೆ ಎಂದು ಶ್ರೀ ರಜಪೂತ್ ಕರ್ಣಿ ಸೇನಾ ಹೇಳಿದೆ.
ಕರ್ಣಿ ಸೇನೆಯ ರಾಷ್ಟ್ರ ಅಧ್ಯಕ್ಷ ಸುಖ್ ದೇವ್ ಸಿಂಗ್ ಗೊಗಾಮಡಿ ಅವರ ನಿರ್ದೇಶನದಂತೆ ಸೇನೆಯ ಕೆಲವು ಸದಸ್ಯರು ಶುಕ್ರವಾರ ಸಿನಿಮಾ ವೀಕ್ಷಿಸಿದ್ದೆವು, ಸಿನಿಮಾದಲ್ಲಿ ರಜಪೂತರ ಶೌರ್ಯ ಮತ್ತು ತ್ಯಾಗವನ್ನು ವೈಭವೀಕರಿಸಿದ್ದಾರೆ. ಈ ಸಿನಿಮಾ ವೀಕ್ಷಿಸಿದ ನಂತರ ಎಲ್ಲ ರಜಪೂತರಿಗೆ ಹೆಮ್ಮೆಯಾಗುತ್ತದೆ ಎಂದು ಮುಂಬೈ ಕರ್ಣಿ ಸೇನೆಯ ನೇತಾರ ಯೋಗೇಂದ್ರ ಸಿಂಗ್ ಕಟಾರ್ ಹೇಳಿದ್ದಾರೆ.
ರಜಪೂತರ ಭಾವನೆಗಳಿಗೆ ಧಕ್ಕೆಯಾಗುವಂತೆ ದೆಹಲಿ ರಾಜ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಮೇವರ್ ರಾಣಿ ಪದ್ಮಿನಿ ಜತೆ ಯಾವುದೇ ಆಕ್ಷೇಪಾರ್ಹ ದೃಶ್ಯಗಳು ಅದರಲ್ಲಿಲ್ಲ. ಹಾಗಾಗಿ ಪ್ರತಿಭಟನೆಯನ್ನು ವಾಪಾಸ್ ತೆಗೆದುಕೊಂಡು ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ಭಾರತದ ಎಲ್ಲ ಪ್ರದೇಶಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಕಟಾರ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.