ಅಲಹಾಬಾದ್: ಮೂವರು ಅಪರಿಚಿತರು ದಲಿತ ಕಾನೂನು ವಿದ್ಯಾರ್ಥಿ ಮೇಲೆ ಕಬ್ಬಿಣದ ಸರಳು ಹಾಗೂ ಇಟ್ಟಿಗೆಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಇಲ್ಲಿನ ಕತ್ರಾ ರೆಸ್ಟೋರೆಂಟ್ ಬಳಿ ಶನಿವಾರ ತಡರಾತ್ರಿ ನಡೆದಿದೆ.
ಮೃತ ದಿಲೀಪ್ ಸರೋಜ್ ಅಲಹಾಬಾದಿನ ಕಾನೂನು ಪದವಿ ಕಾಲೇಜ್ನ ವಿದ್ಯಾರ್ಥಿ. ಈತ ಪ್ರತಾಪ್ಗರ್ನ ಹತೀಗಾವದ ನಿವಾಸಿ.
ಮೂವರು ಅಪರಿಚಿತರಲ್ಲಿ ವಿಜಯ್ ಶಂಕರ್ ಎಂಬಾತನ ಗುರುತು ಪತ್ತೆಯಾಗಿದೆ. ಆತ ರೈಲ್ವೆ ಇಲಾಖೆಯ ಟಿಕೆಟ್ ಪರೀಕ್ಷಕ ಎಂದು ತಿಳಿದು ಬಂದಿದೆ. ದಾರಿಹೋಕರು ಮಾಡಿದ ವಿಡಿಯೊದಿಂದ ಈತನನ್ನು ಗುರುತಿಸಲು ಸಾಧ್ಯವಾಯಿತು ಎಂದು ಕೊಲೊನೆಲ್ಗಂಜ್ ಇನ್ಸ್ಪೆಕ್ಟರ್ ಅವದೇಶ್ ಸಿಂಗ್ ತಿಳಿಸಿದ್ದಾರೆ.
ಸರೋಜ್ ಹಾಗೂ ಆತನ ಸ್ನೇಹಿತರು ಭಾನುವಾರ ರಾತ್ರಿ ರೆಸ್ಟೋರೆಂಟ್ಗೆ ಬಂದಿದ್ದರು. ಆಗ ಅನ್ಯರ ಜತೆ ವಾಗ್ವಾದ ಶುರುವಾಯಿತು. ಬಳಿಕ ಅಪರಿಚಿತರು ಸರೋಜ್ ಮೇಲೆ ಹಲ್ಲೆ ನಡೆಸಿದ್ದಾರೆ. ‘ ನನ್ನ ಸಹಾಯಕರ ಸಹಾಯದಿಂದ ಸರೋಜ್ನನ್ನು ಆಸ್ಪತ್ರೆಗೆ ದಾಖಲಿಸಿದೆ. ಆದರೆ ಚಿಕಿತ್ಸೆ ನಡೆಯುವ ವೇಳೆ ಸಾವೀಗೀಡಾದರು’ ಎಂದು ರೆಸ್ಟೋರೆಂಟ್ ಮಾಲೀಕ ಅಮಿತ್ ಉಪಾಧ್ಯಾಯ್ ಘಟನೆ ಬಗ್ಗೆ ವಿವರಿಸಿದ್ದಾರೆ.
ದಿಲೀಪ್ ಸಹೋದರ ಮಹೇಶ್ ಚಂದ್ರ ಸರೋಜ್ ಅವರು ಮೂವರು ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.