ನವದೆಹಲಿ: ಇಂಗ್ಲಿಷ್ ಸಂವಹನ, ಪಠ್ಯೇತರ ಚಟುವಟಿಕೆಗಳ ವೆಚ್ಚ, ವಿದ್ಯಾಭ್ಯಾಸ ವೆಚ್ಚದ ಪರಿಣಾಮ, ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗಗಳ ಮಕ್ಕಳು ಶಾಲೆ ಬಿಡಲು ಕಾರಣವಾಗಿದೆ ಎಂದು ‘ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ‘ದ (ಎನ್ಸಿಪಿಸಿಆರ್) ವರದಿ ತಿಳಿಸಿದೆ.
ಇದಕ್ಕಾಗಿ ದೆಹಲಿಯ 650 ಖಾಸಗಿ ಶಾಲೆಗಳನ್ನು ಸಂಪರ್ಕಿಸಿ ಎನ್ಸಿಪಿಸಿಆರ್ ಈ ವರದಿ ಸಿದ್ಧಪಡಿಸಿದೆ.
ಶಾಲೆ ಬಿಡುವ ಮಕ್ಕಳ ಪ್ರಮಾಣ 2011ರಲ್ಲಿ ಶೇ 26 ರಷ್ಟು ಇತ್ತು. ಆ ಪ್ರಮಾಣ 2014ರಲ್ಲಿ ಶೇ 10ಕ್ಕೆ ಇಳಿದಿದ್ದರೂ ಅಂತಹ ಪ್ರಮುಖ ವ್ಯತ್ಯಾಸಗಳೇನೂ ಆಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆರ್ಟಿಇ ಕಾಯ್ದೆಯಡಿ ಖಾಸಗಿ, ಅನುದಾನರಹಿತ ಶಾಲೆಗಳು ಒಂದನೇ ತರಗತಿ ಅಥವಾ ಪ್ರಾಥಮಿಕ ಹಂತದ ತರಗತಿಗಳಿಗೆ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯ ಶೇ 25ರಷ್ಟು ಸೀಟುಗಳನ್ನು ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಿಟ್ಟು, ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು. ಆದರೆ ಆ ಸೀಟುಗಳು ಸಿರಿವಂತರ ಪಾಲಾಗುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ,
ಆರ್ಟಿಇ ಸೀಟು ಪಡೆದ ಮಕ್ಕಳು ಪೂರ್ವ ಮತ್ತು ಪ್ರಾಥಮಿಕ ಹಂತದಲ್ಲಿ ಆರ್ಥಿಕ ವೆಚ್ಚದ ಪರಿಣಾಮ ಮಧ್ಯೆದಲ್ಲೇ ಶಾಲೆ ಬಿಡುತ್ತಿದ್ದಾರೆ. ಈ ಪ್ರಮಾಣ ವರ್ಷದದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎಂದು ವರದಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.