ADVERTISEMENT

ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ: ಎಎಪಿ ಶಾಸಕ ಪ್ರಕಾಶ್‌ ಜರ್ವಾಲ್‌ ಬಂಧನ

ಏಜೆನ್ಸೀಸ್
Published 21 ಫೆಬ್ರುವರಿ 2018, 6:48 IST
Last Updated 21 ಫೆಬ್ರುವರಿ 2018, 6:48 IST
ಪ್ರಕಾಶ್‌ ಜರ್ವಾಲ್‌ (ಸಂಗ್ರಹ ಚಿತ್ರ).
ಪ್ರಕಾಶ್‌ ಜರ್ವಾಲ್‌ (ಸಂಗ್ರಹ ಚಿತ್ರ).   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಿವಾಸದಲ್ಲಿ ಸೋಮವಾರ ರಾತ್ರಿ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಅವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಆಮ್‌ ಆದ್ಮಿ ಪಕ್ಷದ(ಎಎಪಿ) ಶಾಸಕ ಪ್ರಕಾಶ್‌ ಜರ್ವಾಲ್‌ ಹಾಗೂ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸಲಹೆಗಾರ ವಿ.ಕೆ. ಜೈನ್ ಅವರನ್ನು ಬುಧವಾರ ಪೊಲಿಸರು ಬಂಧಿಸಿದ್ದಾರೆ.

ಈ ಬಗ್ಗೆ ಸ್ವತಃ ಅಂಶು ಪ್ರಕಾಶ್‌ ಅವರು ಮಂಗಳವಾರ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ದೂರು ನೀಡಿದ್ದರು.

ಎಎಪಿ ಶಾಸಕರಾದ ಅಜಯ್‌ ದತ್‌ ಮತ್ತು ಪ್ರಕಾಶ್‌ ಜರ್ವಾಲ್‌ ವಿರುದ್ಧ ಪೊಲೀಸರಿಗೂ ದೂರು ನೀಡಿದ್ದರು.

ADVERTISEMENT

ಆದರೆ, ಈ ಆರೋಪವನ್ನು ಮುಖ್ಯಮಂತ್ರಿ ಕಚೇರಿ ನಿರಾಕರಿಸಿದೆ. ‘ಪಕ್ಷದ ಶಾಸಕರು ಯಾರ ಮೇಲೂ ಹಲ್ಲೆ ನಡೆಸಿಲ್ಲ. ಮುಖ್ಯ ಕಾರ್ಯದರ್ಶಿಯೇ ಶಾಸಕರ ಜತೆ ಅನುಚಿತವಾಗಿ ವರ್ತಿಸಿದ್ದಾರೆ’ ಎಂದು ಎಎಪಿ ಹೇಳಿತ್ತು.

ದೆಹಲಿ ನಾಗರಿಕ ಸೇವಾ (ಡಿಎಎಸ್‌) ಅಧಿಕಾರಿಗಳು ಮತ್ತು ಎಎಪಿ ಶಾಸಕರ ನಡುವಿನ ಜಟಾಪಟಿಯಿಂದ ಸಚಿವಾಲಯ ರಣರಂಗವಾಗಿತ್ತು.

ಮುಖ್ಯ ಕಾರ್ಯದರ್ಶಿ ಆರೋಪ
ಜಾಹೀರಾತು ಕುರಿತು ಚರ್ಚಿಸಲು ಸೋಮವಾರ ರಾತ್ರಿ ತಮ್ಮನ್ನು ಕರೆಸಿಕೊಂಡ ಮುಖ್ಯಮಂತ್ರಿ, ಕೊಠಡಿಯೊಂದರಲ್ಲಿ ಕೂಡಿಹಾಕಿ ಶಾಸಕರ ಪ್ರಶ್ನೆಗಳಿಗೆ ಉತ್ತರಿಸುವಂತೆ ಸೂಚಿಸಿದರು.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಕೆಲಸ ಮಾಡುವುದಾಗಿ ಹೇಳಿದಾಗ ಸಿಟ್ಟಿಗೆದ್ದ 11 ಶಾಸಕರು ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಕೆಲವು ಶಾಸಕರು ತಮ್ಮನ್ನು ಥಳಿಸಿದರು.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.