ನವದೆಹಲಿ: ಹಾವು ಕಚ್ಚಿತೆಂದು ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಹಾವಿನ ಹೆಡೆಯನ್ನೇ ಕಚ್ಚಿ ತಿಂದಿರುವ ಘಟನೆ ಉತ್ತರ ಪ್ರದೇಶದ ಹರ್ಡೋಯಿ ಜಿಲ್ಲೆಯಲ್ಲಿ ನಡೆದಿದೆ.
ಶುಕ್ಲಾಪುರ ಬಗಾರ್ ಗ್ರಾಮದ ಸೋನೆಲಾಲ್ ಎಂಬಾತ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾನೆ. ಆದರೆ ಚಿಕಿತ್ಸೆ ನೀಡಿದ ವೈದ್ಯರು ಈತನಿಗೆ ಹಾವು ಕಚ್ಚಿರುವುದಕ್ಕೆ ದೇಹದಲ್ಲಿ ಯಾವುದೇ ಗುರುತು ಇಲ್ಲ ಎಂದು ಹೇಳಿದ್ದಾನೆ.
‘ಜಾನುವಾರುಗಳಿಗೆ ಹೊಲದಲ್ಲಿ ಮೇವು ಕತ್ತರಿಸುವಾಗ ಹಾವು ಕಚ್ಚಿತು. ಅದು ಅಲ್ಲೇ ಇತ್ತು. ಕೋಪಗೊಂಡ ನಾನು ಹಾವನ್ನು ಹಿಡಿದು ಅದರ ಹೆಡೆಯನ್ನು ಕಚ್ಚಿ ತಿಂದು ನಂತರ ಉಗಿದೆ’ ಎಂದು ಸೊನೆಲಾಲ್ ಹೇಳಿದ್ದಾನೆ.
‘ಹೆಡೆ ತಿಂದ ಬಳಿಕ ಈತ ಪ್ರಜ್ಞಾಹೀನನಾಗಿ ಬಿದ್ದಿದ್ದ. ನಂತರ ಆತನನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಪಡೆದ 3 ಗಂಟೆಗಳ ನಂತರ ಆತನಿಗೆ ಪ್ರಜ್ಞೆ ಬಂದಿದೆ. ಅಂದೇ ಮನೆಗೆ ಕಳುಹಿಸಲಾಗಿದೆ. ಆದರೆ ಆತ ಅಸಹಜವಾಗಿ ವರ್ತಿಸುತ್ತಿದ್ದಾನೆ’ ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.
‘ಸೋನೆಲಾಲ್ ಮದ್ಯ ವ್ಯಸನಿ, ಕುಡಿದ ಅಮಲಿನಲ್ಲಿಯೇ ಹೀಗೆ ಮಾಡಿರಲು ಸಾಧ್ಯ’ ಎಂದು ಗ್ರಾಮಸ್ಥರು ಹೇಳಿಕೆ ಕೊಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.