ಶಿಲ್ಲಾಂಗ್: ಪ್ರಧಾನಿ ನರೇಂದ್ರ ಮೋದಿ ಒಬ್ಬ ‘ಖ್ಯಾತ ಜಾದೂಗಾರ’ರಾಗಿದ್ದು ಪ್ರಜಾಪ್ರಭುತ್ವವನ್ನೂ ಮಾಯ ಮಾಡಬಲ್ಲರು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದರು.
ಇಲ್ಲಿನ ಜೊವಾಯಿಯಲ್ಲಿ ಚುನಾವಣಾ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಬಹುಕೋಟಿ ಸಾಲ ಮರುಪಾವತಿ ಮಾಡದೆ ಪರಾರಿಯಾಗಿರುವ ಉದ್ಯಮಿಗಳಾದ ನೀರವ್ ಮೋದಿ ಮತ್ತು ವಿಜಯ್ ಮಲ್ಯ ಅವರ ಪ್ರಕರಣಗಳನ್ನು ಉಲ್ಲೇಖಿಸಿ ಮಾತನಾಡಿದರು.
‘ಪ್ರಧಾನಿಯವರು ಕೇವಲ ಬೆರಳ ತುದಿಯಿಂದಲೇ ವಸ್ತುಗಳನ್ನು ಕಾಣುವಂತೆ ಮತ್ತು ಮಾಯ ಮಾಡಬಲ್ಲ ಖ್ಯಾತ ಜಾದೂಗಾರರಾಗಿದ್ದಾರೆ. ಯಾವುದೇ ಶ್ರಮವಿಲ್ಲದೆ ಅನೇಕ ವಸ್ತುಗಳು ಕಾಣುವಂತೆ ಮತ್ತು ಕಣ್ಮರೆಯಾಗುವಂತೆ ಅವರು ಮಾಡಿದ್ದಾರೆ. ಹಗರಣಗಳಲ್ಲಿ ಭಾಗಿಯಾದ ಉದ್ಯಮಿಗಳಾದ ವಿಜಯ್ ಮಲ್ಯ, ಲಲಿತ್ ಮೋದಿ ಮತ್ತು ನೀರವ್ ಮೋದಿಯಂಥವರು ಭಾರತದಿಂದ ಕಣ್ಮರೆಯಾಗಿದ್ದು, ಭಾರತದ ಕಾನೂನಿನ ಕೈಗೆ ಸಿಕ್ಕದೆ ವಿದೇಶಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೋದೀಜಿ ಅವರ ಜಾದೂ ಶೀಘ್ರದಲ್ಲೇ ಪ್ರಜಾಪ್ರಭುತ್ವವನ್ನೂ ಭಾರತದಿಂದ ಮಾಯ ಮಾಡಲಿದೆ’ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
60 ಸದಸ್ಯಬಲದ ಮೇಘಾಲಯ ವಿಧಾನಸಭೆಗೆ ಇದೇ 27ರಂದು ಚುನಾವಣೆ ನಡೆಯಲಿದೆ. ಕಳೆದ ಮೂರು ಅವಧಿಯಿಂದ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಇದೀಗ ನಾಲ್ಕನೇ ಬಾರಿ ಸರ್ಕಾರ ರಚಿಸುವ ತವಕದಲ್ಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.