ADVERTISEMENT

ಎಐಯುಡಿಎಫ್ ಬೆಳವಣಿಗೆ: ರಾವತ್ ಹೇಳಿಕೆಗೆ ಸೇನೆ ಸಮರ್ಥನೆ

ಪಿಟಿಐ
Published 22 ಫೆಬ್ರುವರಿ 2018, 19:30 IST
Last Updated 22 ಫೆಬ್ರುವರಿ 2018, 19:30 IST
ಎಐಯುಡಿಎಫ್ ಬೆಳವಣಿಗೆ:  ರಾವತ್  ಹೇಳಿಕೆಗೆ ಸೇನೆ ಸಮರ್ಥನೆ
ಎಐಯುಡಿಎಫ್ ಬೆಳವಣಿಗೆ: ರಾವತ್ ಹೇಳಿಕೆಗೆ ಸೇನೆ ಸಮರ್ಥನೆ   

ನವದೆಹಲಿ: ಬಿಜೆಪಿಗಿಂತಲೂ ಅಸ್ಸಾಂನ ರಾಜಕೀಯ ಪಕ್ಷವಾಗಿರುವ ‘ಆಲ್‌ ಇಂಡಿಯಾ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌‘ (ಎಐಯುಡಿಎಫ್) ವೇಗವಾಗಿ ಬೆಳೆಯುತ್ತಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಬುಧವಾರ ನೀಡಿರುವ ಹೇಳಿಕೆಯನ್ನು ಸೇನೆ ಗುರುವಾರ ಸಮರ್ಥಿಸಿಕೊಂಡಿದೆ.

‘ರಾವತ್ ಹೇಳಿಕೆಯಲ್ಲಿ ಯಾವುದೇ ಧಾರ್ಮಿಕ ಅಥವಾ ರಾಜಕೀಯ ಉದ್ದೇಶ ಇಲ್ಲ. ಈಶಾನ್ಯ ಪ್ರದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆಯಷ್ಟೇ ಮಾತನಾಡಿದ್ದಾರೆ’ ಎಂದು ಸೇನೆ ಸ್ಪಷ್ಟಪಡಿಸಿದೆ.

ಈಶಾನ್ಯ ಪ್ರದೇಶದಲ್ಲಿ ಜನ ಸಾಮಾನ್ಯರ ಮತ್ತು ಸೇನೆಯ ಅಂತರ ಕಡಿತಗೊಳಿಸುವ ಮತ್ತು ಭದ್ರತಾ ಗಡಿಗಳ ಬಗ್ಗೆ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾವತ್‌, ಈ ಹೇಳಿಕೆ ನೀಡಿದ್ದರು. ಅಸ್ಸಾಂ ಕೆಲ ಜಿಲ್ಲೆಗಳಲ್ಲಿ ಮುಸ್ಲಿಮರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ ಎಂಬ ವರದಿಯನ್ನು ಆಧರಿಸಿ ಮಾತನಾಡಿದ್ದ ಅವರು,  ‘ಪಾಕಿಸ್ತಾನ ಚೀನಾದ ನೆರವಿನೊಂದಿಗೆ ಭಾರತ ಮೇಲೆ ಪರೋಕ್ಷ ಯುದ್ಧ ಸಾರುತ್ತಿದೆ. ಬಾಂಗ್ಲಾದೇಶದ ಗಡಿಯಲ್ಲಿರುವ ಅಸ್ಸಾಂಗೆ ಈ ಮೂಲಕ ಬಾಂಗ್ಲಾದೇಶೀಯರನ್ನು ಅಕ್ರಮವಾಗಿ ರವಾನೆ ಮಾಡಿ ಈ ಪ್ರಾಂತ್ಯದಲ್ಲಿ ಅಶಾಂತಿಯನ್ನುಂಟು ಮಾಡುತ್ತಿದೆ’ ಎಂದಿದ್ದರು.

ADVERTISEMENT

‘ಈಶಾನ್ಯ ಗಡಿಯಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದಾರೆ. ಎಐಯುಡಿಎಫ್ ಎಂಬ ಪಕ್ಷ ಅಥವಾ ಸಂಘಟನೆ ಇಂತಹ ಅಕ್ರಮ ವಲಸಿಗರ ನೆರವಿಗೆ ನಿಂತಿದೆ. ಇದನ್ನು ಗಮನಿಸಿದರೆ 1980ರಲ್ಲಿ ಬಿಜೆಪಿ ಬೆಳೆದ ವೇಗಕ್ಕಿಂತಲೂ ಈ ಪಕ್ಷ ವೇಗವಾಗಿ ಬೆಳೆಯುತ್ತಿದೆ’ ಎಂದು ರಾವತ್ ಹೇಳಿದ್ದರು.

ಈ ಹೇಳಿಕೆಯನ್ನು ಖಂಡಿಸಿರುವ ಪಕ್ಷದ ಅಧ್ಯಕ್ಷ ಬದ್ರುದ್ದೀನ್‌ ಅಜ್ಮಲ್‌, ‘ಇದು ರಾಜಕೀಯಪ್ರೇರಿತವಾಗಿದ್ದು ದಿಗ್ಭ್ರಮೆ ಮೂಡಿಸಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.