ನವದೆಹಲಿ: ಕೋವಿಡ್ ಮೂರನೇ ಅಲೆಯಲ್ಲಿ ಸೋಂಕಿನಿಂದ ಮೃತಪಟ್ಟಿರುವ ಶೇ 60ರಷ್ಟು ರೋಗಿಗಳು ಪೂರ್ಣವಾಗಿ ಲಸಿಕೆ ಪಡೆದಿರಲಿಲ್ಲ ಅಥವಾ ಭಾಗಶಃ ಪಡೆದಿದ್ದವರು ಎಂದು ಅಧ್ಯಯನವೊಂದು ತಿಳಿಸಿದೆ.
ಮ್ಯಾಕ್ಸ್ ಹೆಲ್ತ್ಕೇರ್ ಖಾಸಗಿ ಆಸ್ಪತ್ರೆ ಈ ಅಧ್ಯಯನ ನಡೆಸಿದೆ. ಆ ಪ್ರಕಾರ 70 ವರ್ಷ ಮೀರಿದವರು ಅಥವಾ ಕ್ಯಾನ್ಸರ್, ಮೂತ್ರಪಿಂಡ ವೈಫಲ್ಯ, ಮಧುಮೇಹ, ಹೃದಯಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದವರು ಮೃತಪಟ್ಟಿದ್ದಾರೆ.
‘ನಮ್ಮ ಸಮೂಹದ ಆಸ್ಪತ್ರೆಗಳಲ್ಲಿ ಸುಮಾರು 82 ಜನ ಅಸುನೀಗಿದ್ದಾರೆ. ಇವರಲ್ಲಿ ಶೇ 60ರಷ್ಟು ಮಂದಿ ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿರಲಿಲ್ಲ ಅಥವಾ ಭಾಗಶಃ ಮಾತ್ರ ಪಡೆದಿದ್ದರು’ ಎಂದು ಆಸ್ಪತ್ರೆಯ ಹೇಳಿಕೆಯು ತಿಳಿಸಿದೆ.
ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರೂ, ಇತರೆ ರೋಗಗಳಿಂದ ಬಳಲುತ್ತಿರುವವರು ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವವವರು ಮೃತಪಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೋವಿಡ್ ಮೂರು ಅಲೆ ಕುರಿತ ಅಂಕಿ ಅಂಶದ ಪ್ರಕಾರ, ಮೂರನೇ ಅಲೆಯಲ್ಲಿ ಶೇ 23.4ರಷ್ಟು ರೋಗಿಗಳಿಗೆ ಆಮ್ಲಜನಕದ ಬೆಂಬಲ ಬೇಕಿದೆ. ಈ ಪ್ರಮಾಣ ಎರಡನೇ ಅಲೆಯಲ್ಲಿ ಶೆ 74, ಮೊದಲ ಅಲೆಯಲ್ಲಿ ಶೇ 63ರಷ್ಟಿತ್ತು,
ತಮ್ಮ ಸಮೂಹದ ಆಸ್ಪತ್ರೆಗಳಲ್ಲಿ ಈವರೆಗೆ ಕೋವಿಡ್ನಿಂದ 41 ಮಂದಿ ಮಕ್ಕಳು ದಾಖಲಾಗಿದ್ದಾರೆ. ಈ ವಯೋಮಾನದವರಲ್ಲಿ ಸಾವು ಸಂಭವಿಸಿಲ್ಲ. ಏಳು ಮಂದಿ ಐಸಿಯುನಲ್ಲಿ, ಇಬ್ಬರು ವೆಂಟಿನೇಟರ್ನಲ್ಲಿ ಇದ್ದಾರೆ ಎಂದೂ ಹೇಳಿಕೆಯು ತಿಳಿಸಿದೆ.
ದೆಹಲಿಯಲ್ಲಿ ಎರಡನೇ ಅಲೆಯಲ್ಲಿ ಏಪ್ರಿಲ್ ತಿಂಗಳು 28000 ಪ್ರಕರಣ ದಾಖಲಾಗಿದ್ದಾಗ, ಎಲ್ಲ ಹಾಸಿಗೆಗಳು ಭರ್ತಿ ಆಗಿದ್ದವು. ಈಗಿನ ಮೂರನೇ ಅಲೆಯಲ್ಲಿ ಕಳೆದ ವಾರ ಗರಿಷ್ಠ ಪ್ರಕರಣಗಳು ವರದಿ ಆಗಿದ್ದರೂ ಹಾಸಿಗೆ ಸಮಸ್ಯೆ ಕಂಡಿಲ್ಲ. ಕ್ರಮವಾಗಿ ಮೂರು ಅಲೆಗಳಲ್ಲಿ ಆಸ್ಪತ್ರೆಗೆ 20,883, 12,444 ಮತ್ತು 1,378 ಮಂದಿ ದಾಖಲಾಗಿದ್ದಾರೆ ಎಂದಿದೆ.
ಮ್ಯಾಕ್ಸ್ ಆಸ್ಪತ್ರೆ ಸಮೂಹದ ಅಂಕಿ ಅಂಶಗಳನ್ನು ಈ ಅಧ್ಯಯನ ಆಧರಿಸಿದೆ. ಒಟ್ಟಾರೆ ಸಾವಿನ ಪ್ರಕರಣ ಮೊದಲ ಅಲೆಯಲ್ಲಿ ಶೇ 7.2, ಎರಡನೇ ಅಲೆಯಲ್ಲಿ ಶೇ 10.5 ಇತ್ತು. ಈಗಿನ ಅಲೆಯಲ್ಲಿ ಶೇ 6ರಷ್ಟಿದೆ ಎಂದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.