ADVERTISEMENT

7 ನಕ್ಸಲರ ಹತ್ಯೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST

ನಾಗಪುರ (ಪಿಟಿಐ): ಛತ್ತೀಸಗಡದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿರುವ ಭಾತ್ಪರ್ ಅರಣ್ಯದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಏಳು ನಕ್ಸಲರು ಸಾವನ್ನಪ್ಪಿದ್ದು,  ಹಲವರು ಗಾಯಗೊಂಡ ಘಟನೆ ಗುರುವಾರ  ಬೆಳಿಗ್ಗೆ ನಡೆದಿದೆ.

ನಕ್ಸಲರ ತಾಣ ಎನಿಸಿರುವ ಭಾತ್ಪರ್ ಅರಣ್ಯದಲ್ಲಿ ಸುಮಾರು 100 ಶಸ್ತ್ರ ಸಜ್ಜಿತ ನಕ್ಸಲರು ರಹಸ್ಯ ಸಭೆ ನಡೆಸುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇಲೆ ನಕ್ಸಲ್ ನಿಗ್ರಹ ಪಡೆ ಮೂರು ಪ್ರತ್ಯೇಕ ತುಕಡಿಗಳು ಬೆಳಿಗ್ಗೆ ಅಲ್ಲಿಗೆ ತಲುಪಿದವು. ಆ  ಪ್ರದೇಶವನ್ನು ಸುತ್ತುವರಿದು ನಕ್ಸಲರ ಮೇಲೆ ದಾಳಿ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲರು ತಕ್ಷಣವೇ ಯದ್ವಾತದ್ವಾ ಗುಂಡಿನ ದಾಳಿ ನಡೆಸಿದರು. ಸುಮಾರು ಎರಡು ಗಂಟೆಗಳ ಕಾಲ ಗುಂಡಿನ ಕಾಳಗ ಮುಂದುವರಿದಿತ್ತು.
ಘಟನಾ ಸ್ಥಳದಲ್ಲಿ ನಾಲ್ವರು ನಕ್ಸಲರ  ಮೃತದೇಹಗಳು  ಪೊಲೀಸರಿಗೆ ದೊರತಿದ್ದು, `ಗುಂಡಿನ ಕಾಳಗದ ವೇಳೆ ಮೂರು ಮೃತ ದೇಹಗಳನ್ನು ಕೊಂಡೊಯ್ಯುವಲ್ಲಿ ನಕ್ಸಲರು ಯಶಸ್ವಿಯಾಗಿದ್ದಾರೆ' ಎಂದು ಕಾರ್ಯಾಚರಣೆಯ ನೇತೃತ್ವವಹಿಸಿದ್ದ ಅಹೇರಿ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಭರತ್ ಠಾಕೂರ್ ತಿಳಿಸಿದ್ದಾರೆ. ಘಟನೆಯಲ್ಲಿ ಮೂವರು ಪೊಲೀಸರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.