ನವದೆಹಲಿ: ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಿವೃತ್ತ ಸೈನಿಕರು ಸೇನಾ ಸಮವಸ್ತ್ರ ಧರಿಸಿ ಪಥಸಂಚಲವನ್ನು ನಡೆಸಿದರು.
‘ಪ್ರತಿಭಟನೆ ನಿರತ ರೈತರು ಕಿಸಾನ್ ಮಜ್ದೂರ್ ಆಜಾದ್ ಸಂಗ್ರಾಮ್ ದಿನ ಆಚರಿಸಿದರು. ಹಿರಿಯ ರೈತ ನಾಯಕ ಸತ್ನಾಮ್ ಸಿಂಗ್ (85) ಬೆಳಳಿಗ್ಗೆ 11 ಗಂಟೆಗೆ ಧ್ವಜಾರೋಹಣ ನೆರವೇರಿಸಿದರು. ಬಳಿಕ ನಿವೃತ್ತ ಸೈನಿಕರು ಪಥಸಂಚಲನ ನಡೆಸಿದರು. ಜಲಂಧರ್ನ ಡಿಎವಿ ಕಾಲೇಜಿನ ವಿದ್ಯಾರ್ಥಿಗಳು ಒಂದೂವರೆ ಗಂಟೆಗಳ ಕಾಲ ನೃತ್ಯ ಪ್ರದರ್ಶಿಸಿದರು. ಕಾರ್ಯಕ್ರಮ ಅಂದಾಜು ನಾಲ್ಕು ಗಂಟೆಗೆ ಮುಕ್ತಾಯವಾಯಿತು’ ಎಂದು ರೈತನಾಯಕ ರಾಮಿಂದರ್ ಸಿಂಗ್ ತಿಳಿಸಿದರು.
ಕೆಎಫ್ಸಿ ರೆಸ್ಟೋರೆಂಟ್ ಬಳಿ ಆರಂಭವಾದ ನಿವೃತ್ತ ಸೈನಿಕರ ಪಥಸಂಚಲನವು ಸಿಂಘು ಗಡಿಯ ಮುಖ್ಯದ್ವಾರದ ವರೆಗೆ ನಡೆಯಿತು. ಕಿಸಾನ್ ಮಜ್ದೂರ್ ಆಜಾದಿ ಸಂಗ್ರಾಮ್ ದಿವಸವನ್ನು ದೇಶದಾದ್ಯಂತ ಆಚರಿಸಲಾಗಿದೆ. ಜನರು ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ರೈತರಿಗೆ ಬೆಂಬಲ ಸೂಚಿಸಿದ್ದಾರೆ ಎಂದು ರಾಮಿಂದರ್ ಸಿಂಗ್ ಹೇಳಿದರು.
ಟಿಕ್ರಿ ಗಡಿಯಲ್ಲಿಯೂ ರೈತರು ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಘಾಜಿಪುರ ಗಡಿಯಲ್ಲಿ ತಿರಂಗ ಯಾತ್ರೆ ನಡೆಸಲಾಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ನ (ಬಿಕೆಯು) ಸದಸ್ಯ ಧಮೇಂದ್ರ ಮಲಿಕ್ ತಿಳಿಸಿದರು. ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಿಸಲಾಯಿತು. ಸುಮಾರು 500 ಬೈಕುಗಳು ತಿರಂಗ ಯಾತ್ರೆಯಲ್ಲಿ ಭಾಗವಹಿಸಿದ್ದವು. ಯಾತ್ರೆ ಹಾಪುರ್ನಿಂದ ಆರಂಭವಾಗಿ ಘಾಜಿಪುರ ಗಡಿಯನ್ನು ತಲುಪಿತು ಎಂದಿದ್ದಾರೆ.
ಕೇಂದ್ರ ಸರ್ಕಾರ ಜಾರಿ ಮಾಡಿರುವ ಮೂರು ಕೃಷಿ ನೀತಿಗಳನ್ನು ಹಿಂಪಡೆಯುವಂತೆ ಒತ್ತಾಯಸಿ ರೈತರು ದೆಹಲಿಯ ಗಡಿಗಳಲ್ಲಿ 2020ರ ನವೆಂಬರ್ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.