ನವದೆಹಲಿ: ದೆಹಲಿ ಮತ್ತು ಹರಿದ್ವಾರದಲ್ಲಿ ನಡೆದ ಪ್ರತ್ಯೇಕ ಕಾರ್ಯಕ್ರಮಗಳಲ್ಲಿನ ದ್ವೇಷಭಾಷಣಗಳ ಕುರಿತು ಸ್ವಯಪ್ರೇರಿತವಾಗಿ ದೂರು ಸ್ವೀಕರಿಸಬೇಕೆಂದು 76 ವಕೀಲರು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.
‘ಈ ಭಾಷಣಗಳು ಕೇವಲ ದ್ವೇಷದ ಭಾಷಣಗಳಲ್ಲ. ಇಡೀ ಸಮುದಾಯವೊಂದರ ಹತ್ಯೆಯ ಬಹಿರಂಗ ಕರೆಯಾಗಿದೆ. ಇಂಥ ಭಾಷಣಗಳು ನಮ್ಮ ದೇಶದ ಏಕತೆ ಮತ್ತು ಸಮಗ್ರತೆಗೆ ಗಂಭೀರ ಬೆದರಿಕೆಯನ್ನೊಡ್ಡುತ್ತವೆ. ಇದರಿಂದ ಲಕ್ಷಾಂತರ ಮುಸ್ಲಿಮರ ಜೀವಕ್ಕೆ ಅಪಾಯವುಂಟಾಗುವ ಸಾಧ್ಯತೆ ಇದೆ’ ಎಂದು ಪತ್ರದಲ್ಲಿ ವಕೀಲರು ತಿಳಿಸಿದ್ದಾರೆ.
‘ಇತ್ತೀಚಿಗೆ ಇಂಥ ಸರಣಿ ಭಾಷಣಗಳು ಗಮನಸೆಳೆದಿದ್ದು, ಇಂಥ ಘಟನೆಗಳನ್ನು ತಡೆಯಲು ತುರ್ತಾಗಿ ನ್ಯಾಯಾಂಗದ ಹಸ್ತಕ್ಷೇಪದ ಅಗತ್ಯವಿದೆ. ಹಾಗಾಗಿ, ಸಿಜೆಐ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು’ ಎಂದು ಪತ್ರಕ್ಕೆ ಸಹಿ ಹಾಕಿರುವ ಹಿರಿಯ ವಕೀಲರಾದ ಸಲ್ಮಾನ್ ಖುರ್ಷಿದ್, ದುಷ್ಯಂತ್ ದವೆ ಮತ್ತು ಮೀನಾಕ್ಷಿ ಅರೋರಾ ಅವರು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.