
ಪತ್ತನಂತಿಟ್ಟ (ಕೇರಳ): ರಾಜ್ಯದಲ್ಲಿ ‘ಮಿದುಳು ತಿನ್ನುವ ಅಮೀಬಾ’ (ಅಮೀಬಿಕ್ ಮೆನಿಂಗೊ ಎನ್ಸೆಫಲೈಟಿಸ್) ಸೋಂಕು ವರದಿಯಾಗುತ್ತಿರುವ ಕಾರಣ ಶಬರಿಮಲೆ ಯಾತ್ರೆ ಕೈಗೊಳ್ಳುವ ಭಕ್ತರಿಗೆ ಕೇರಳದ ಆರೋಗ್ಯ ಇಲಾಖೆ ಶನಿವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ನದಿಯಲ್ಲಿ ತೀರ್ಥಸ್ನಾನ ಮಾಡುವಾಗ ಭಕ್ತರು ಮೂಗಿನೊಳಗೆ ನೀರು ಹೋಗದಂತೆ ಎಚ್ಚರ ವಹಿಸಬೇಕು ಎಂದು ಇಲಾಖೆ ತಿಳಿಸಿದೆ. ಆದರೆ, ಅದಕ್ಕೆ ನಿರ್ದಿಷ್ಟ ಕಾರಣವೇನೆಂಬುದನ್ನು ತಿಳಿಸಿಲ್ಲ. ಇದಕ್ಕೂ ಮುನ್ನ ಮಿದುಳು ಜ್ವರ ಸೋಂಕು ಹೆಚ್ಚಾದಾಗಲೂ ಕೇರಳ ಇಂಥದ್ದೇ ನಿರ್ದೇಶನಗಳನ್ನು ನೀಡಿತ್ತು.
ಬಿಸಿನೀರನ್ನು ಮಾತ್ರ ಕುಡಿಯಲು, ಊಟಕ್ಕೆ ಮೊದಲು ಕೈ ತೊಳೆಯಲು ಮತ್ತು ತೊಳೆದ ಹಣ್ಣುಗಳನ್ನು ಸೇವಿಸುವಂತೆ ಯಾತ್ರಿಕರಿಗೆ ತಿಳಿಸಿದೆ. ಚಿಕಿತ್ಸೆ ಪಡೆಯುತ್ತಿರುವ ಯಾತ್ರಿಗಳು ತಮ್ಮ ಔಷಧ, ವೈದ್ಯಕೀಯ ದಾಖಲೆಗಳನ್ನು ತರುವಂತೆ ಇಲಾಖೆ ಸೂಚಿಸಿದೆ.
ವೈದ್ಯರು ಮತ್ತು ತರಬೇತಿ ಪಡೆದ ಸ್ವಯಂಸೇವಕರನ್ನು ಯಾತ್ರೆಯ ಹಾದಿಗಳಲ್ಲಿ ನಿಯೋಜಿಸಲಾಗಿದೆ. ಯಾತ್ರೆ ವೇಳೆ ಆರೋಗ್ಯ ಸಮಸ್ಯೆ ಎದುರಾದಲ್ಲಿ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವಂತೆ ಮತ್ತು ತುರ್ತು ವೈದ್ಯಕೀಯ ನೆರವಿಗಾಗಿ 04735 203232 ಸಂಪರ್ಕಿಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ನವೆಂಬರ್ 17ರಿಂದ ಶಬರಿಮಲೆ ಯಾತ್ರೆ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.