ಮುಂಬೈ: ತನ್ನ ಮಗಳನ್ನು ಹತ್ಯೆ ಮಾಡಿದಆರೋಪಿ ಆಫ್ತಾಬ್ ಅಮಿನ್ ಪೂನಾವಾಲಾನನ್ನು ನೇಣಿಗೇರಿಸಬೇಕು ಎಂದುಶ್ರದ್ಧಾ ವಾಲಕರ್ ತಂದೆ ವಿಕಾಸ್ ವಾಲಕರ್ ಶುಕ್ರವಾರ ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿಕಾಸ್, ‘ನನ್ನ ಮಗಳನ್ನು ಕೊಲೆ ಮಾಡಿದ ಅಫ್ತಾಬ್ ಪೂನಾವಾಲಾಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು.ಪೂನಾವಾಲಾ ಸೇರಿದಂತೆ ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಶ್ರದ್ಧಾ ದೂರು ನೀಡಿದ್ದರೂ ತನಿಖೆ ವಿಳಂಬ ಮಾಡಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಬೇಕು. ಅವರು ತಕ್ಷಣ ಕಾರ್ಯಪ್ರವೃತ್ತರಾಗಿದ್ದರೆ, ನನ್ನ ಮಗಳು ಈಗ ಜೀವಂತವಾಗಿರುತ್ತಿದ್ದಳು’ ಎಂದು ಅವರು ಹೇಳಿದರು.
ದೆಹಲಿ ರಾಜ್ಯಪಾಲರು ಮತ್ತು ಡಿಸಿಪಿ ದೆಹಲಿ ದಕ್ಷಿಣ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಫಡಣವೀಸ್ ಅವರು ಕುಟುಂಬಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ ಎಂದು ವಿಕಾಸ್ ವಾಲಕರ್ ತಿಳಿಸಿದರು.
ತನ್ನ ಸಹಜೀವನ ಸಂಗಾತಿ ಶ್ರದ್ಧಾಳನ್ನು ಕೊಲೆಗೈದ ಆಫ್ತಾಬ್ ಅಮೀನ್ ಪೂನಾವಾಲಾ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಬಿಸಾಡಿದ್ದ. 2020ರ ನವೆಂಬರ್ನಲ್ಲಿ ತುಲಿಂಜ್ ಪೊಲೀಸರಿಗೆ ಶ್ರದ್ಧಾ ಲಿಖಿತ ದೂರು ಸಲ್ಲಿಸಿದ್ದರು.
ನ್ಯಾಯಾಂಗ ಬಂಧನ ಅವಧಿ 14 ದಿನ ವಿಸ್ತರಣೆ
ನವದಹೆಲಿ ಕಾಲ್ಸೆಂಟರ್ ಉದ್ಯೋಗಿ, ಮುಂಬೈ ಮೂಲದ ಶ್ರದ್ಧಾ ವಾಲಕರ್ ಹತ್ಯೆ ಪ್ರಕರಣದ ಆರೋಪಿ ಹಾಗೂ ಆಕೆಯ ಸಹಜೀವನದ ಸಂಗಾತಿ ಆಫ್ತಾಬ್ ಅಮೀನ್ ಪೂನಾವಾಲಾನ್ಯಾಯಾಂಗ ಬಂಧನವನ್ನು ಇಲ್ಲಿನ ನ್ಯಾಯಾಲಯ ಶುಕ್ರವಾರ 14 ದಿನಗಳ ಕಾಲ ವಿಸ್ತರಿಸಿದೆ ಎಂದು ಮೂಲಗಳು ತಿಳಿಸಿವೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ಪೂನಾವಾಲಾನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ನ. 26ರಂದು ನಡೆದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಆರೋಪಿಯ ನ್ಯಾಯಾಂಗ ಬಂಧನವನ್ನು 13 ದಿನಗಳ ಕಾಲ ವಿಸ್ತರಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.