ADVERTISEMENT

ಅಮಿತ್‌ ಶಾ ನಿವಾಸದ ಎದುರು ಧರಣಿಗೆ ಯೋಜನೆ: ಎಎಪಿ ನಾಯಕರ ಮೇಲೆ ಹಲ್ಲೆ, ಬಂಧನ

ಏಜೆನ್ಸೀಸ್
Published 13 ಡಿಸೆಂಬರ್ 2020, 7:44 IST
Last Updated 13 ಡಿಸೆಂಬರ್ 2020, 7:44 IST
ಎಎಪಿ ನಾಯಕಿ ಅತಿಶಿಯನ್ನು ಬಂಧಿಸಿದ ದೆಹಲಿ ಪೊಲೀಸರು
ಎಎಪಿ ನಾಯಕಿ ಅತಿಶಿಯನ್ನು ಬಂಧಿಸಿದ ದೆಹಲಿ ಪೊಲೀಸರು   

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ನಿವಾಸದ ಎದುರು ಧರಣಿಗೆ ಯೋಜನೆ ರೂಪಿಸಿದ ಹಿನ್ನೆಲೆಯಲ್ಲಿ ಆಮ್‌ ಆದ್ಮಿ ಪಕ್ಷದ ನಾಯಕ ರಾಘವ್‌ ಛಡ್ಡಾ, ಅತಿಶಿ ಸೇರಿದಂತೆ ಹಲವು ನಾಯಕರನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ದೆಹಲಿ ಜಲ ಮಂಡಳಿ ಉಪಾಧ್ಯಕ್ಷರೂ ಆಗಿರುವ ಛಡ್ಡಾ ಅವರನ್ನು ರಾಜೇಂದ್ರ ನಗರ ಪೊಲೀಸರು ಬಂಧಿಸಿದ್ದಾರೆಂದು ಎಎಪಿ ತಿಳಿಸಿದೆ.

ಇದೇ ವೇಳೆ ಅಮಿತ್‌ ಶಾ ನಿವಾಸದ ಎದುರು ಪ್ರತಿಭಟನೆಗೆ ಮುಂದಾದ ಎಎಪಿ ನಾಯಕಿ ಅತಿಶಿ ಅವರ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿ, ವಶಕ್ಕೆ ಪಡೆದಿದ್ದಾರೆ ಎಂದು ಎಎಪಿ ವಿಡಿಯೊ ಟ್ವೀಟ್‌ ಮಾಡಿದೆ.

ADVERTISEMENT

ಇನ್ನುಳಿದ ಎಎಪಿ ಮುಖಂಡರಾದ ಸಂಜೀವ್‌ ಝಾ, ರೀತುರಾಜ್‌ ಗೋವಿಂದ್‌ ಮತ್ತು ಕುಲದೀಪ್‌ ಕುಮಾರ್‌ ಅವರನ್ನು ಬಂಧಿಸಿದ್ದೇವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ದೆಹಲಿ ಮಹಾನಗರ ಪಾಲಿಕೆಯಲ್ಲಿ ₹2,400 ಕೋಟಿಗೂ ಅಧಿಕ ಹಣ ದುರುಪಯೋಗವಾಗಿದೆ ಎಂಬ ಆರೋಪ ಕೇಳಿಬಂದಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ನಿವಾಸದ ಎದುರು ಧರಣಿ ನಡೆಸುವುದಾಗಿ ಆಮ್‌ ಆದ್ಮಿ ಪಕ್ಷ ಶನಿವಾರ ತಿಳಿಸಿತ್ತು.

ಬಿಜೆಪಿ ಆಡಳಿತವಿರುವ ಪುರಸಭೆ ನಿಗಮಗಳ ನಾಯಕರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದ ಹೊರಗೆ ಧರಣಿ ಕುಳಿತಿರುವ ಸಮಯದಲ್ಲೇ ಎಎಪಿ ಈ ನಿರ್ಧಾರ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.