ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾಂಗ್ರೆಸ್ ನಾಯಕರನ್ನು 'ಆಕಸ್ಮಿಕ ಹಿಂದೂಗಳು' ಎಂದು ಕರೆದರೆ, ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ 'ಚುನಾವಣಾ ಹಿಂದೂಗಳು' ಎಂದು ಕರೆದಿದ್ದಾರೆ.
'ಚುನಾವಣೆ ಸಮಯದಲ್ಲಿ ಈ ನಾಯಕರು ಹಿಂದೂಗಳಾಗುತ್ತಾರೆ' ಎಂದು ಯೋಗಿ ಆದಿತ್ಯನಾಥ್ ಅವರು ಸೋಮವಾರ ಅಮೇಥಿಯಲ್ಲಿ ಸಭೆಯನ್ನುದ್ದೇಶಿಸಿ ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ದೇವಸ್ಥಾನದಲ್ಲಿ ಕುಳಿತುಕೊಳ್ಳಲು ಸಹ ತಿಳಿದಿಲ್ಲ. ಹಿಂದೂ ಧರ್ಮ ಅಥವಾ ಹಿಂದುತ್ವದ ಬಗ್ಗೆ ಏನೂ ತಿಳಿದಿಲ್ಲ ಎಂದು ಮುಖ್ಯಮಂತ್ರಿಗಳು ವ್ಯಂಗ್ಯವಾಡಿದರು.
'ಗುಜರಾತ್ ಚುನಾವಣೆಯ ಸಂದರ್ಭದಲ್ಲಿ, ಅಮೇಥಿಯ ಮಾಜಿ ಸಂಸದ (ರಾಹುಲ್ ಗಾಂಧಿ) ದೇವಸ್ಥಾನಕ್ಕೆ ಹೋಗಿ ಅಲ್ಲಿ ನಮಾಜ್ ಮಾಡುವಂತೆ ಕುಳಿತರು. ಅರ್ಚಕರು ಅವರನ್ನು ಎಚ್ಚರಿಸಿದರು. ದೇವಸ್ಥಾನದಲ್ಲಿ ಹೇಗೆ ಕುಳಿತುಕೊಳ್ಳಬೇಕು ಎಂದು ಅವರಿಗೆ ಕಲಿಸಿಕೊಟ್ಟರು" ಎಂದು ಗೇಲಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಅಮೇಥಿಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ‘ಹಿಂದೂ’ ಮತ್ತು ‘ಹಿಂದುತ್ವ’ಗಳ ನಡುವಿನ ವ್ಯತ್ಯಾಸವನ್ನು ವಿವರಿಸುವ ಪ್ರಯತ್ನ ಮಾಡಿದ್ದರು. ಮಹಾತ್ಮಾ ಗಾಂಧೀಜಿ ಅವರನ್ನು ಹಿಂದೂ ಎಂದೂ, ಗೋಡ್ಸೆಯನ್ನು ಹಿಂದುತ್ವವಾದಿ ಎಂದು ರಾಹುಲ್ ಹೇಳಿದ್ದರು.
ಈ ಮಧ್ಯೆ, ಉಪಮುಖ್ಯಮಂತ್ರಿ ಕೇಶವ್ ಮೌರ್ಯ ಅವರೂ ರಾಹುಲ್ ಮತ್ತು ಪ್ರಿಯಾಂಕಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರಸೇವಕರ ಮೇಲೆ ಗುಂಡು ಹಾರಿಸಿದವರು ಮತ್ತು ಕನ್ವಾರಿಯಾಗಳ ಮೇಲೆ ಲಾಠಿ ಪ್ರಹಾರ ಮಾಡಿದವರು ಇದ್ದಕ್ಕಿದ್ದಂತೆ ರಾಮ ಜಪ ಮಾಡುತ್ತಿದ್ದಾರೆ. ಇಂತಹ 'ಚುನಾವಣಾ ಹಿಂದೂ'ಗಳ ಬಗ್ಗೆ ಜನರು ಎಚ್ಚರದಿಂದ ಇರಬೇಕೆಂದು ಅವರು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.