ಕೋಲ್ಕತ್ತ:‘ನಾನು ಪಾಕಿಸ್ತಾನದವ. ನೀವು ಏನು ಮಾಡ್ತೀರೋ ಮಾಡಿ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಕೇಂದ್ರ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.
ಪಶ್ಚಿಮ ಬಂಗಾಳದ ಬಶೀರ್ಹಾತ್ನಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಗುರುವಾರ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ (ಸಿಎಎ) ಮತ್ತು ಎನ್ಆರ್ಸಿ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
‘ಇವತ್ತು ನಾನು ಪಾಕಿಸ್ತಾನಿ ಎಂದು ಹೇಳಿಕೊಳ್ಳಲು ಬಯಸುತ್ತೇನೆ. ನೀವೇನು ಮಾಡುತ್ತೀರೋ ಮಾಡಿ. ದೆಹಲಿಯಲ್ಲಿ ಕುಳಿತವರು ಏನು ಹೇಳುತ್ತಾರೋ ನಾವದನ್ನು ಮಾಡಬೇಕಿದೆ. ಇಲ್ಲವಾದಲ್ಲಿ ನಮ್ಮನ್ನು ದೇಶದ್ರೋಹಿ ಎಂಬಂತೆ ಬಿಂಬಿಸಲಾಗುತ್ತಿದೆ’ ಎಂದು ಚೌಧರಿ ಹೇಳಿದ್ದಾರೆ.
ಭಾರತವು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸ್ವತ್ತಲ್ಲ ಎಂದೂ ಅವರು ಹೇಳಿದ್ದಾರೆ.
ಉಗ್ರರಿಗೆ ನೆರವು ನೀಡಿದ ಆರೋಪದಲ್ಲಿ ಇತ್ತೀಚೆಗೆ ಜಮ್ಮು–ಕಾಶ್ಮೀರ ಡಿವೈಎಸ್ಪಿ ದೇವೇಂದ್ರ ಸಿಂಗ್ ಬಂಧಿಸಿದ್ದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದ ಚೌಧರಿ ಆರ್ಎಸ್ಎಸ್ ಅನ್ನು ಟೀಕಿಸಿದ್ದರು. ‘ಬಣ್ಣ, ನಂಬಿಕೆ ಮತ್ತು ಧರ್ಮವನ್ನು ಲೆಕ್ಕಿಸದೇ ನಮ್ಮ ದೇಶದ ಶತ್ರುಗಳನ್ನು ಖಂಡಿಸಬೇಕು. ಆರೋಪಿ ದೇವೇಂದ್ರ ಸಿಂಗ್ ಬದಲು ದೇವೇಂದ್ರ ಖಾನ್ ಆಗಿದ್ದರೆ, ಆರ್ಎಸ್ಎಸ್ ಟ್ರೋಲ್ ತಂಡವು ಗದ್ದಲವೆಬ್ಬಿಸುತ್ತಿತ್ತು. ದೇಶದ ಶತ್ರುಗಳನ್ನು ಅವರ ವರ್ಣ, ನಂಬಿಕೆ ಮತ್ತು ಧರ್ಮಗಳನ್ನು ಲೆಕ್ಕಿಸದೇ ನಾವು ಖಂಡಿಸಬೇಕು’ ಎಂದು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.