ADVERTISEMENT

ಕಾನೂನು ಸುವ್ಯವಸ್ಥೆ ಮರುಸ್ಥಾಪಿಸಿದ ಯೋಗಿ: ನಿತಿನ್‌ ಗಡ್ಕರಿ

ಚುನಾವಣೆಯಲ್ಲಿ ಬಿಜೆಪಿಗೆ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ

ಪಿಟಿಐ
Published 12 ಫೆಬ್ರುವರಿ 2022, 3:35 IST
Last Updated 12 ಫೆಬ್ರುವರಿ 2022, 3:35 IST
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ   

ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಹೇಳಿದ್ದಾರೆ.

ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಗಡ್ಕರಿ ಅವರು, ‘ಬಿಜೆಪಿ ಸರ್ಕಾರಗಳು ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು ಮತ್ತು ಬಡವರ ಕಲ್ಯಾಣಕ್ಕಾಗಿ ತೆಗೆದುಕೊಂಡಿರುವ ಕ್ರಮಗಳಿಂದಾಗಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಧನಾತ್ಮಕ ಫಲಿತಾಂಶ ದೊರಕಲಿದೆ’ ಎಂದರು.

ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಸರ್ಕಾರ ಇದೆ. ಈ ನಾಲ್ಕು ರಾಜ್ಯಗಳಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಪಂಜಾಬ್‌ನಲ್ಲೂ ಪ್ರಬಲ ಶಕ್ತಿಯಾಗಿ ಬಿಜೆಪಿ ಹೊರಹೊಮ್ಮಲಿದೆ ಎಂದು ಅವರು ಹೇಳಿದರು.

ADVERTISEMENT

ಉತ್ತರ ಪ್ರದೇಶದ ರೈತರು ಆಡಳಿತಾರೂಢ ಪಕ್ಷದ ವಿರುದ್ಧ ಅಸಮಾಧಾನ ಹೊಂದಿರುವುದನ್ನು ಗಡ್ಕರಿ ಅಲ್ಲಗಳೆದರು. ‘ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ರೈತರಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿವೆ. ಅನ್ನದಾತ ಈಗ ಶಕ್ತಿದಾತನಾಗಿದ್ದಾನೆ.ಹೆಚ್ಚುವರಿಯಾಗಿ ಉಳಿಯುವ ಕಬ್ಬು, ಜೋಳ, ಭತ್ತ ಮತ್ತು ಗೋದಿಯನ್ನು ಜೈವಿಕ ಎಥೆನಾಲ್‌ ತಯಾರಿಕೆಗೆ ಬಳಸಲಾಗುತ್ತಿದೆ. ಇದರಿಂದ ರೈತರಿಗೆ ಹೆಚ್ಚಿನ ಆದಾಯ ಹೆಚ್ಚಾಗಿದೆ’ ಎಂದು ಅವರು ಹೇಳಿದರು.

ಯೋಗಿ ಆದಿತ್ಯನಾಥ ಅವರ ಕುರಿತು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಆದಿತ್ಯನಾಥ ಅವರು ಗೂಂಡಾ ರಾಜ್ಯವನ್ನು ಕೊನೆಗಾಣಿಸಿ ಉತ್ತರ ಪ್ರದೇಶವನ್ನು ಅಭಿವೃದ್ಧಿ ಪಥದಲ್ಲಿ ನಡೆಸುತ್ತಿದ್ದಾರೆ. ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಉತ್ತೇಜನ ನೀಡಿದ್ದಾರೆ. ಉತ್ತಮ ರಸ್ತೆ ಸಂಪರ್ಕ ಮತ್ತು ಯುವ ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿದ್ದಾರೆ ಎಂದರು.

ಆದಿತ್ಯನಾಥ ಅವರ ಉಗ್ರ ಹಿಂದುತ್ವವಾದದ ಕುರಿತು ವಿಪಕ್ಷಗಳು ನಡೆಸುತ್ತಿರುವ ಟೀಕೆಗಳ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗಡ್ಕರಿ, ‘ಜಾತಿವಾದ ಮತ್ತು ಸಂಪ್ರದಾಯವಾದದಲ್ಲಿ ನಮಗೆ ನಂಬಿಕೆ ಇಲ್ಲ. ಸಮಾಜವಾದಿ ಪಕ್ಷ–ರಾಷ್ಟ್ರೀಯ ಲೋಕದಳ ಮೈತ್ರಿಕೂಟವನ್ನು ಜನರು ತಿರಸ್ಕರಿಸಲಿದ್ದಾರೆ’ ಎಂದರು.

ಗೋವಾದಲ್ಲಿ ಏರ್ಪಟ್ಟಿರುವ ಸ್ಪರ್ಧೆ ಕುರಿತು ಮಾತನಾಡಿದ ಅವರು, ಆಮ್‌ ಆದ್ಮಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್‌ ಪಕ್ಷಗಳು ಕಾಂಗ್ರೆಸ್‌ ಮತವನ್ನು ವಿಭಜಿಸಿ ಬಿಜೆಪಿಗೆ ಅನುಕೂಲ ಮಾಡಿಕೊಡಲಿದೆ ಎಂದರು.

*

ಮುಂದಿನ ಐದು ವರ್ಷಗಳಲ್ಲಿ ಭಾರತದ ರಸ್ತೆ ವ್ಯವಸ್ಥೆಯು ಅಮೆರಿಕದ ರಸ್ತೆ ವ್ಯವಸ್ಥೆಗೆ ಸರಿಸಮನಾಗಿರುತ್ತದೆ ಎಂಬ ಭರವಸೆಯನ್ನು ನಾನು ಜನರಿಗೆ ನೀಡುತ್ತಿದ್ದೇನೆ.
-ನಿತಿನ್ ಗಡ್ಕರಿ, ಕೇಂದ್ರ ಸಾರಿಗೆ, ಹೆದ್ದಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.