ನವದೆಹಲಿ: ‘ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನ ದ್ವಿಸದಸ್ಯ ಪೀಠದ ಹೇಳಿಕೆ ಖಂಡಿಸಿದ್ದ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಇತರರ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಕೈಗೊಳ್ಳುವುದು ಸರಿಯಲ್ಲ’ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಸುಪ್ರೀಂಕೋರ್ಟ್ಗೆ ತಿಳಿಸಿದ್ದಾರೆ.
‘ದೆಹಲಿ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಸ್.ಎನ್.ಡಿಂಗ್ರಾ, ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್ ಲೇಖಿ ಮತ್ತು ಹಿರಿಯ ವಕೀಲ ಕೆ.ರಾಮಕುಮಾರ್ ಅವರ ಹೇಳಿಕೆ ನ್ಯಾಯಾಂಗದ ಘನತೆಗೆ ಚ್ಯುತಿ ತರುವಂತಿದೆ. ಹೀಗಾಗಿ ಇವರ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಕೈಗೊಳ್ಳಬೇಕು’ ಎಂದು ವಕೀಲಸಿ.ಆರ್.ಜಯ ಸುಕಿನ್ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ವೇಳೆ ವೇಣುಗೋಪಾಲ್ ಈ ರೀತಿ ಹೇಳಿದ್ದಾರೆ.
‘ಡಿಂಗ್ರಾ, ಅಮನ್ ಹಾಗೂ ರಾಮಕುಮಾರ್ ಅವರು ವಿವೇಚನಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಇವರ ಹೇಳಿಕೆಗಳು ನ್ಯಾಯಾಂಗವನ್ನು ನಿಂದಿಸುವ, ನ್ಯಾಯಾಂಗದ ಕಾರ್ಯವೈಖರಿ ಟೀಕಿಸುವ ಧಾಟಿಯಲ್ಲಿ ಇರಲಿಲ್ಲ’ ಎಂದಿದ್ದಾರೆ.
‘ಸುಪ್ರೀಂಕೋರ್ಟ್ನ ತೀರ್ಪುಗಳ ವಿರುದ್ಧ ಬಹುತೇಕ ಸಂದರ್ಭಗಳಲ್ಲಿ ನ್ಯಾಯಯೋಚಿತ ಟೀಕೆಗಳು ವ್ಯಕ್ತವಾಗುವುದು ಸಹಜ. ಅವುಗಳನ್ನೆಲ್ಲಾ ನ್ಯಾಯಾಂಗ ನಿಂದನೆ ಎಂದು ಹೇಳಲಾಗದು’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.