
ಬಾಲೇಶ್ವರ(ಒಡಿಶಾ): ಭಾರತವು ಶುಕ್ರವಾರ ಒಡಿಶಾದ ಚಾಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನಿಂದ ಮಧ್ಯಂತರ ಶ್ರೇಣಿಯ ಖಂಡಾಂತರ ಕ್ಷಿಪಣಿ ಅಗ್ನಿ-3 ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಡಾವಣೆಯು ಕಾರ್ಯಾಚರಣೆ ಮತ್ತು ತಾಂತ್ರಿಕ ನಿಯತಾಂಕಗಳನ್ನು ಪೂರ್ಣಗೊಳಿಸಿದೆ ಎಂದು ವರದಿ ತಿಳಿಸಿದೆ. ಈ ಪರೀಕ್ಷೆಯನ್ನು ಕಾರ್ಯತಂತ್ರದ ಪಡೆಗಳ ಕಮಾಂಡ್ನ ಆಶ್ರಯದಲ್ಲಿ ನಡೆಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.
ಉತ್ಪಾದನಾ ಸ್ಥಳದಿಂದ ಕ್ಷಿಪಣಿಯನ್ನು ರ್ಯಾಂಡಮ್ ಆಗಿ ಆಯ್ಕೆ ಮಾಡಿಕೊಂಡು ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು. ಎಸ್ಎಫ್ಸಿ ಕಾರ್ಯತಂತ್ರದ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಕ್ಷಿಪಣಿ ಹೊಂದಿದೆ ಎಂದು ಅವರು ಹೇಳಿದರು. ಉಡಾವಣೆಯು ಎಲ್ಲಾ ಕಾರ್ಯಾಚರಣೆ ಮತ್ತು ತಾಂತ್ರಿಕ ನಿಯತಾಂಕಗಳನ್ನು ಮೌಲ್ಯೀಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಯಂ-ಉಡಾವಣೆಗೆ ಆಜ್ಞೆಯನ್ನು ನೀಡಿದ ನಂತರ, ಎರಡು ಹಂತದ ಘನ ಚಾಲಿತ ಕ್ಷಿಪಣಿ ಗೊತ್ತುಪಡಿಸಿದ ಹಾರಾಟದ ಮಾರ್ಗದಲ್ಲಿ ಹೊರಟು ಬಂಗಾಳಕೊಲ್ಲಿಯಲ್ಲಿ ಪೂರ್ವ ನಿಗದಿತ ಗುರಿ ಪ್ರದೇಶವನ್ನು ನಿಖರತೆಯೊಂದಿಗೆ ಮುಟ್ಟಿತು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ಮೂಲಗಳು ಈ ಕ್ಷಿಪಣಿಯು ಮಿಷನ್ನ ಎಲ್ಲ ಉದ್ದೇಶಗಳನ್ನು ಪೂರೈಸಿದೆ ಎಂದು ತಿಳಿಸಿವೆ.
17 ಮೀಟರ್ ಉದ್ದದ ಕ್ಷಿಪಣಿಯ ವಿವಿಧ ನಿಯತಾಂಕಗಳು ಮತ್ತು ಪಥವನ್ನು ಪೂರ್ವ ಕರಾವಳಿಯಾದ್ಯಂತದ ರಾಡಾರ್ಗಳು ಹಾಗೂ ಟೆಲಿಮೆಟ್ರಿ ಮತ್ತು ಎಲೆಕ್ಟ್ರೋ-ಆಪ್ಟಿಕಲ್ ವ್ಯವಸ್ಥೆಗಳ ಮೂಲಕ ನೈಜ ಸಮಯದಲ್ಲಿ ಟ್ರ್ಯಾಕ್ ಮಾಡಿ ಮೇಲ್ವಿಚಾರಣೆ ಮಾಡಲಾಯಿತು. ಇಂಪ್ಯಾಕ್ಟ್ ಪಾಯಿಂಟ್ ಬಳಿ ಎರಡು ಡೌನ್-ರೇಂಜ್ ಹಡಗುಗಳು ಟರ್ಮಿನಲ್ ಈವೆಂಟ್ ಅನ್ನು ದಾಖಲಿಸಿವೆ ಎಂದು ಅವರು ಹೇಳಿದ್ದಾರೆ.
ಅಗ್ನಿ-3 ಕ್ಷಿಪಣಿಯು ಅದರ ವರ್ಗದ ಅತ್ಯಾಧುನಿಕ ಮತ್ತು ನಿಖರವಾದ ಕ್ಷಿಪಣಿಗಳಲ್ಲಿ ಒಂದಾಗಿದೆ. ಈಗಾಗಲೇ ಸಶಸ್ತ್ರ ಪಡೆಗಳಿಗೆ ಸೇರಲ್ಪಟ್ಟಿದೆ. ಇದು 1.5 ಟನ್ ತೂಕದ ಪೇಲೋಡ್ ಅನ್ನು 3,000 ಕಿ.ಮೀಗಳಿಗಿಂತ ಹೆಚ್ಚು ದೂರಕ್ಕೆ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.