ಮೊಹಾನಿಯಾ (ಬಿಹಾರ): ರಕ್ಷಣಾ ಬಜೆಟ್ ಅನ್ನು ದೊಡ್ಡ ಉದ್ಯಮಿಗಳ ಲಾಭಕ್ಕಾಗಿ ವಿನಿಯೋಗಿಸುವ ಉದ್ದೇಶದಿಂದ ನರೇಂದ್ರ ಮೋದಿ ಸರ್ಕಾರ ‘ಅಗ್ನಿವೀರ್’ ಯೋಜನೆ ಜಾರಿಗೊಳಿಸಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದರು.
ಉತ್ತರ ಪ್ರದೇಶದ ಗಡಿಯಲ್ಲಿರುವ ಬಿಹಾರದ ಕೈಮೂರ್ ಜಿಲ್ಲೆಯ ಮೊಹಾನಿಯಾದಲ್ಲಿ ಅವರು ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯಲ್ಲಿ ಮಾತನಾಡಿದರು. ಈ ಭಾಗದಿಂದ ಸಶಸ್ತ್ರ ಪಡೆಗಳಿಗೆ ದೊಡ್ಡ ಪ್ರಮಾಣದಲ್ಲಿ ಯುವಕರು ದಾಖಲಾಗುತ್ತಾರೆ. ಎರಡು ವರ್ಷಗಳ ಹಿಂದೆ ಅಗ್ನಿವೀರ್ ಯೋಜನೆ ವಿರುದ್ಧ ಇಲ್ಲಿ ಭಾರಿ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದಿದ್ದವು.
‘ಅಗ್ನಿವೀರ್ ಯೋಜನೆಯಲ್ಲಿ ಸಾಮಾನ್ಯ ಸೇನಾ ಯೋಧನಿಗೆ ದೊರೆಯವಂತೆ ವೇತನ ಮತ್ತು ಪಿಂಚಣಿ ದೊರೆಯುವುದಿಲ್ಲ. ಅಲ್ಲದೆ ಕ್ಯಾಂಟೀನ್ ಸೌಲಭ್ಯವೂ ಇರುವುದಿಲ್ಲ’ ಎಂದು ರಾಹುಲ್ ದೂರಿದರು.
‘ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರವು ರಕ್ಷಣಾ ಬಜೆಟ್ ಅನ್ನು ಸೈನಿಕ ವೇತನ ಮತ್ತು ಇತರ ಸವಲತ್ತುಗಳಿಗೆ ಖರ್ಚು ಮಾಡಲು ಬಯಸುತ್ತಿಲ್ಲ. ಬದಲಿಗೆ ಅದು ವ್ಯಾಪಾರ ಸಂಸ್ಥೆಯ ಲಾಭಕ್ಕಾಗಿ ಈ ಹಣವನ್ನು ಖರ್ಚು ಮಾಡಲು ಬಯಸುತ್ತಿದೆ’ ಎಂದು ರಾಹುಲ್ ಗಾಂಧಿ ಹೇಳಿದರು. ಕೇಂದ್ರ ಸರ್ಕಾರವು 2022ರ ಜೂನ್ 15ರಂದು ‘ಅಗ್ನಿಪಥ್’ ಯೋಜನೆ ಆರಂಭಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.