ADVERTISEMENT

ಪಿಣರಾಯಿ ವಿರುದ್ಧದ ಪ್ರತಿಭಟನೆ; ಏರ್‌ಲೈನ್ಸ್ ವರದಿಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 14:09 IST
Last Updated 16 ಜೂನ್ 2022, 14:09 IST
ವಿ.ಡಿ. ಸತೀಶನ್‌
ವಿ.ಡಿ. ಸತೀಶನ್‌   

ತಿರುವನಂತಪುರ:ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಇತ್ತೀಚೆಗೆ ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯ ಕುರಿತು ಇಂಡಿಗೊ ಏರ್‌ಲೈನ್ಸ್ ಉದ್ಯೋಗಿ ಸಲ್ಲಿಸಿರುವ ವರದಿಯಲ್ಲಿ ಸುಳ್ಳು ಮತ್ತುಹುರುಳಿಲ್ಲದಿರುವುದು ಎದ್ದುಕಾಣಿಸುತ್ತಿದೆ ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಗುರುವಾರ ಆರೋಪಿಸಿದ್ದಾರೆ.

ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಂಶ ಹೊರತರಬೇಕುಎಂದು ಅವರು ಇಂಡಿಗೋ ಏರ್‌ಲೈನ್ಸ್ ಆಡಳಿತಕ್ಕೆ ಮನವಿಯನ್ನೂ ಸಲ್ಲಿಸಿದ್ದಾರೆ.

ಇಂಟರ್ ಗ್ಲೋಬ್ ಏವಿಯೇಷನ್ ಲಿಮಿಟೆಡ್ (ಇಂಡಿಗೊ ಏರ್‌ಲೈನ್ಸ್) ಸಹ ಉಪಾಧ್ಯಕ್ಷ ವರುಣ್ ದ್ವಿವೇದಿ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಸತೀಶನ್‌, ಸ್ಥಳೀಯ ಪೊಲೀಸರಿಗೆ ಸಲ್ಲಿಸಿರುವ ವರದಿಯ ವಿವರಗಳುಘಟನೆಗೆ ಸಾಕ್ಷಿಯಾದ ಎಲ್‌ಡಿಎಫ್ ಸಂಚಾಲಕ ಇ.ಪಿ. ಜಯರಾಜನ್ ಸೇರಿಸಹ ಪ್ರಯಾಣಿಕರು ನೀಡಿದ ಹೇಳಿಕೆಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿವೆ ಎಂದು ಆರೋಪಿಸಿದ್ದಾರೆ.

ADVERTISEMENT

ವಿಮಾನದಲ್ಲಿ ಸಿಎಂ ಜೊತೆಗಿದ್ದ ಜಯರಾಜನ್ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ‘ವಿಜಯನ್ ವಿಮಾನದಿಂದ ಇಳಿದ ನಂತರ ಕಾರ್ಯಕರ್ತರು ರಾಜೀನಾಮೆ ನೀಡುವಂತೆ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು’.ಅಲ್ಲದೆ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಕೂಡ ಸಿಎಂ ವಿಮಾನದಿಂದ ಇಳಿದ ನಂತರ ಈ ಘಟನೆ ನಡೆದಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಇಂಡಿಗೋ ವಿಮಾನ ನಿಲ್ದಾಣದ ವ್ಯವಸ್ಥಾಪಕರು ಸಲ್ಲಿಸಿರುವ ವರದಿಯಲ್ಲಿ ಪ್ರತಿಭಟನಕಾರರು ಸಿಎಂ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ’ ಎಂದು ಆಕ್ಷೇಪಿಸಿ ಸತೀಶನ್ ಪತ್ರ ಬರೆದಿದ್ದಾರೆ.

‘ಪೊಲೀಸರು, ಸಿಪಿಐ(ಎಂ) ನಾಯಕರು ಮತ್ತು ಮುಖ್ಯಮಂತ್ರಿ ಕಚೇರಿಯ ರಾಜಕೀಯ ಒತ್ತಡ ಮತ್ತು ಪ್ರಭಾವದಿಂದಾಗಿ, ಪ್ರತಿಭಟನಕಾರರ ಮೇಲೆ ಹಲ್ಲೆ ನಡೆಸಿರುವ ಜಯರಾಜನ್‌ಹೆಸರನ್ನು ವರದಿಯಿಂದ ಕೈಬಿಟ್ಟಿರುವುದು ಗಂಭೀರ ಅನುಮಾನ ಹುಟ್ಟುಹಾಕುತ್ತದೆ. ಇದನ್ನು ಗಮನಿಸಿ, ನ್ಯಾಯಯುತ ತನಿಖೆ ನಡೆಸಬೇಕು. ತನಿಖಾ ಸಂಸ್ಥೆಗಳು ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಜಿಡಿಸಿಎ) ವಸ್ತುನಿಷ್ಠ ವರದಿ ಸಲ್ಲಿಸಬೇಕು’ ಎಂದು ಸತೀಶನ್ ಅವರು ದ್ವಿವೇದಿಯವರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.