ಲಖನೌ: ಕಾನ್ಪುರದ ಪ್ರಯೋಗಾಲಯದ ತಂತ್ರಜ್ಞರೊಬ್ಬರನ್ನು (ಲ್ಯಾಬ್ ಟೆಕ್ನಿಷಿಯನ್) ಅಪಹರಿಸಿ, ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ಹತ್ಯೆಗೀಡಾದ ಲ್ಯಾಬ್ ಟೆಕ್ನಿಷಿಯನ್ ಕುಟುಂಬಕ್ಕೆ ₹5 ಲಕ್ಷ ಪರಿಹಾರವನ್ನೂ ಯಾದವ್ ಘೋಷಿಸಿದ್ದಾರೆ.
‘ಜೂನ್ ತಿಂಗಳಿನಲ್ಲಿ ಅಪಹರಣಕ್ಕೊಳಗಾಗಿದ್ದ ಲ್ಯಾಬ್ ಟೆಕ್ನಿಷಿಯನ್ನನ್ನು ವಾರದ ಬಳಿಕ ಹತ್ಯೆಗೈದು, ಶವವನ್ನು ನದಿಯಲ್ಲಿ ಎಸೆಯಲಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಟೆಕ್ನಿಷಿಯನ್ನ ಹತ್ಯೆಯಿಂದಾಗಿ ಕಾನ್ಪುರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಿದರೂ ಅದು ನಿಷ್ಕ್ರಿಯವಾಗಿದೆ. ಹತ್ಯೆಗೀಡಾದ ಟೆಕ್ನಿಷಿಯನ್ನ ಕುಟುಂಬಕ್ಕೆ ಸರ್ಕಾರ ಕನಿಷ್ಠ ₹ 50 ಲಕ್ಷ ಪರಿಹಾರ ನೀಡಬೇಕು. ಸಮಾಜವಾದಿ ಪಕ್ಷ ₹ 5ಲಕ್ಷ ಪರಿಹಾರ ನೀಡಲಿದೆ’ ಎಂದು ಅಖಿಲೇಶ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಅಪಹರಣ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಸರ್ಕಲ್ ಇನ್ಸ್ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರನ್ನು ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಅಮಾನತುಗೊಳಿಸಿದೆ.
ಲ್ಯಾಬ್ ಟೆಕ್ನಿಷಿಯನ್ನ ಕುಟುಂಬವನ್ನು ಹಣಕ್ಕಾಗಿ ಸುಲಿಗೆ ಮಾಡಲಾಗಿದೆಯೇ ಎನ್ನುವ ಕುರಿತು ತನಿಖೆ ಕೈಗೊಳ್ಳುವಂತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿ.ಪಿ. ಜೊಗ್ದಂಡಾ ಅವರಿಗೆ ಸರ್ಕಾರ ಸೂಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.