ADVERTISEMENT

ಬೆಂಗಳೂರು ಪೊಲೀಸರ ಮಾಹಿತಿಯಿಂದ ಉಗ್ರ ಜಾಲ ಭೇದಿಸಿದ ಅಸ್ಸಾಂ ಪೊಲೀಸ್: ಬಿಸ್ವ ಶರ್ಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜುಲೈ 2022, 11:49 IST
Last Updated 29 ಜುಲೈ 2022, 11:49 IST
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ – ಪಿಟಿಐ ಚಿತ್ರ
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ – ಪಿಟಿಐ ಚಿತ್ರ   

ಗುವಾಹಟಿ: ಅಲ್‌ಕೈದಾ ಜತೆ ನಂಟು ಹೊಂದಿರುವ ಉಗ್ರ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಸುಮಾರು 11 ಮಂದಿಯನ್ನು ಬಂಧಿಸಿದ್ದು, ಹೇಳಿಕೆ ದಾಖಲಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.

‘11 ಮಂದಿಯನ್ನು ಬಂಧಿಸಿರುವ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಹೇಗೆ ಬಾಂಗ್ಲಾದೇಶದಿಂದ ಹಣವನ್ನು ಪಡೆದಿದ್ದರು ಎಂಬದನ್ನು ಮತ್ತು ಅವರ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಬೆಂಗಳೂರು ಪೊಲೀಸರು ಹಂಚಿಕೊಂಡಿದ್ದರು’ ಎಂದು ಅವರು ಹೇಳಿದ್ದಾರೆ.

ಬಂಧಿತರಿಗೆ ಅಲ್‌ಕೈದಾ ಭಾರತ ಉಪಖಂಡ ಹಾಗೂ ಬಾಂಗ್ಲಾದೇಶ ಮೂಲದ ಅನ್ಸಾರುಲ್ ಬಾಂಗ್ಲಾ ಟೀಮ್ (ಎಬಿಟಿ) ಜತೆ ಸಂಪರ್ಕ ಇತ್ತು ಎನ್ನಲಾಗಿದೆ. ಬಂಧಿತರ ಪೈಕಿ ಒಬ್ಬ ಮದರಸಾದಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಅಸ್ಸಾಂ ಮುಖ್ಯಮಂತ್ರಿ ಹೇಳಿಕೆ ಉಲ್ಲೇಖಿಸಿ ‘ಎಎನ್‌ಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಲ್‌ಕೈದಾ ಉಗ್ರ ಸಂಘಟನೆ ಜತೆ ನಂಟು ಹೊಂದಿದ್ದ ಇಬ್ಬರು ಉಗ್ರರನ್ನು ಬೆಂಗಳೂರಿನಲ್ಲಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಬೆಂಗಳೂರಿನ ತಿಲಕ್‌ನಗರದಲ್ಲಿ ಜುಲೈ 24ರಂದು ಅಖ್ತರ್ ಹುಸೇನ್ ಲಷ್ಕರ್‌ ಎಂಬಾತನನ್ನು ಬಂಧಿಸಲಾಗಿತ್ತು. ಬಳಿಕ 26ರಂದು ಮತ್ತೊಬ್ಬ ಶಂಕಿತ ಅಬ್ದುಲ್ ಅಲೀಂ ಮಂಡಲ್ ಅಲಿಯಾಸ್ ಜುಬಾನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈತ ಅಲ್‌ಕೈದಾ ಉಗ್ರ ಸಂಘಟನೆಗೆ ನೇಮಕವಾಗಿ ಅಫ್ಗಾನಿಸ್ತಾನಕ್ಕೆ ಹೋಗಲು ಸಿದ್ಧನಾಗಿದ್ದ ಎನ್ನಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.