ADVERTISEMENT

ಶಬರಿಮಲೆ ಅಯ್ಯಪ್ಪ ದೇಗುಲ ನವೆಂಬರ್‌ 16ರಿಂದ ಭಕ್ತರ ದರ್ಶನಕ್ಕೆ ಮುಕ್ತ

ಪಿಟಿಐ
Published 12 ನವೆಂಬರ್ 2021, 10:57 IST
Last Updated 12 ನವೆಂಬರ್ 2021, 10:57 IST
ಶಬರಿಮಲೆ ದೇವಸ್ಥಾನ (ಸಂಗ್ರಹ ಚಿತ್ರ)
ಶಬರಿಮಲೆ ದೇವಸ್ಥಾನ (ಸಂಗ್ರಹ ಚಿತ್ರ)   

ಪತನಂತಿಟ್ಟಾ, ಕೇರಳ: ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಬಾಗಿಲು ಮುಂದಿನ ವಾರ ತೆರೆಯಲಿದ್ದು, ಇದರೊಂದಿಗೆ ಎರಡು ತಿಂಗಳ ವಾರ್ಷಿಕ ಧಾರ್ಮಿಕ ಯಾತ್ರೆ ಅವಧಿಯೂ ಆರಂಭವಾಗಲಿದೆ. ಈ ವೇಳೆ ನಿತ್ಯ ಸುಮಾರು 30 ಸಾವಿರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್‌ 16ರಂದು ಧಾರ್ಮಿಕ ಯಾತ್ರೆ ಅವಧಿ ಆರಂಭವಾಗಲಿದೆ. ನ.15ರಂದು ಸಂಜೆ 5ಕ್ಕೆ ದೇವಸ್ಥಾನದ ಬಾಗಿಲು ತೆರೆಯಲಿದೆ. ಮುಖ್ಯ ಅರ್ಚಕ ಕಂದರಾರು ಮಹೇಶ್‌ ಮೋಹನರಾರು ಉಪಸ್ಥಿತಿಯಲ್ಲಿ ನಿರ್ಗಮಿತ ಅರ್ಚಕ ವಿ.ಕೆ.ಜಯರಾಜ್‌ ಪೊಟ್ಟಿ ದೇಗುಲದ ಬಾಗಿಲು ತೆರೆಯುವರು.

ಅಯ್ಯಪ್ಪ ಮತ್ತು ಮಲ್ಲಿಕಪುರಂ ದೇವಸ್ಥಾನಗಳಿಗೆ ನೂತನ ಅರ್ಚಕರ ನೇಮಕ ಕಾರ್ಯಕ್ರಮವೂ ಬೆಟ್ಟದಲ್ಲಿ ಅದೇ ದಿನ ನಡೆಯಲಿದೆ. ಕೋವಿಡ್ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಈ ಕಾರ್ಯಕ್ರಮಗಳು ನಡೆಯಲಿವೆ. ಎರಡು ಡೋಸ್ ಲಸಿಕೆ ಪಡೆದಿರುವುದು ಅಥವಾ ಆರ್‌ಟಿ–ಪಿಸಿಆರ್ ನಗೆಟಿವ್ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯವಾಗಿದೆ. ಭಕ್ತರು ಆಧಾರ್‌ನ ಮೂಲಪತ್ರವನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪಂಪ ನದಿಯಲ್ಲಿ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಆ ಸ್ಥಳದಲ್ಲಿ ವಾಹನ ನಿಲುಗಡೆಗೆ ಹಾಗೂ ಪಂಪ ಮತ್ತು ಸನ್ನಿಧಾನಂ ಭಕ್ತರು ನೆಲೆಯೂರಲು ಅವಕಾಶ ಇರುವುದಿಲ್ಲ. ದರ್ಶನದ ನಂತರ ಸ್ಥಳದಿಂದ ನಿರ್ಗಮಿಸುವುದು ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.