ADVERTISEMENT

ಎಂಜಲಿಂದ ಪುಟ ತಿರುಗಿಸುವುದಕ್ಕೆ ಅಲಹಾಬಾದ್‌ ಕೋರ್ಟ್ ಆಕ್ಷೇಪ

ಪಿಟಿಐ
Published 27 ಸೆಪ್ಟೆಂಬರ್ 2025, 15:30 IST
Last Updated 27 ಸೆಪ್ಟೆಂಬರ್ 2025, 15:30 IST
<div class="paragraphs"><p>.&nbsp;</p></div>

   

ಲಖನೌ: ನ್ಯಾಯಾಲಯದ ಕಡತಗಳ ಪುಟಗಳನ್ನು ತಿರುಗಿಸಲು ಕೆಲ ಸಿಬ್ಬಂದಿ ಎಂಜಲು ಅಥವಾ ಲಾಲಾರಸವನ್ನು ಬಳಸುವ ‘ಅತ್ಯಂತ ಅನೈರ್ಮಲ್ಯ’ ಅಭ್ಯಾಸದಲ್ಲಿ ತೊಡಗಿದ್ದಾರೆ. ಅದರಲ್ಲೂ ಪಾನ್‌ ಮಸಾಲಾ ಅಥವಾ ಎಲೆ–ಅಡಿಕೆ ಅಗಿಯುವವರು ಹೀಗೆ ಮಾಡಿದರೆ ಹಾಳೆಯ ಮೇಲೆ ಕೆಂ‍ಪು ಕಲೆಗಳಾಗುತ್ತವೆ. ಇದು ಸೋಂಕಿನ ಅಪಾಯ ಒಡ್ಡುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. 

ಅರ್ಜಿಯೊಂದರ ವಿಚಾರಣೆ ನಡೆಸಲು ಕಡತಗಳನ್ನು ಕೈಗೆತ್ತಿಕೊಂಡ ಪೀಠವು, ಹಾಳೆಗಳಲ್ಲಿ ಕೆಂಪು ಗುರುತುಗಳು ಇರುವುದು ಹಾಗೂ ‍ಪ್ರತಿ ನಿತ್ಯವೂ ಇದು ಚಾಳಿಯಂತಾಗಿರುವುದನ್ನು ಗಮನಿಸಿತು. 

ADVERTISEMENT

‘ಎಂಜಲಿನ ಕೆಂಪು ಗುರುತುಗಳಿರುವ ಕಡತಗಳನ್ನು ಸ್ವೀಕರಿಸದಂತೆ ನ್ಯಾಯಾಲಯದ ನೋಂದಣಿ ಹಾಗೂ ಸರ್ಕಾರಿ ಕಾನೂನು ಕಚೇರಿಗಳಿಗೆ ನ್ಯಾಯಮೂರ್ತಿ ಶ್ರೀ ಪ್ರಕಾಶ್‌ ಸಿಂಗ್‌ ಅವರಿದ್ದ ಪೀಠವು ಸೆ.22ರಂದು ನಿರ್ದೇಶನ ನೀಡಿತು. 

‘ಎಂಜಲು ಬಳಸಿ ಪುಟ ತಿರುಗಿಸುವ ಈ ಅಸಹ್ಯಕರ ಮತ್ತು ಖಂಡನೀಯ ಅಭ್ಯಾಸವು ವಕೀಲರ ಸಹಾಯಕರು, ನೋಂದಣಿ ಅಧಿಕಾರಿಗಳು ಅಥವಾ ಸರ್ಕಾರಿ ವಕೀಲರ ಕಚೇರಿ ಮತ್ತು ಮುಖ್ಯ ವಕೀಲರ ಕಚೇರಿಗಳಲ್ಲಿ ಕಡತಗಳನ್ನು ಸಿದ್ಧಪಡಿಸುವಾಗ ನಡೆಯುತ್ತಿದೆ’ ಎಂದು ಪೀಠವು ತಿಳಿಸಿತು.

‘ಈ ಕೊಳಕು ಅಭ್ಯಾಸವನ್ನು ನಿಲ್ಲಿಸದಿದ್ದರೆ, ಇಂಥ ಕಡತಗಳನ್ನು ಮುಟ್ಟುವವರಿಗೆ ಸೋಂಕು ಹರಡಬಹುದು. ನ್ಯಾಯಾಲಯದ ಒಳಬರುವ ಎಲ್ಲಾ ಕಡತಗಳು, ಪುಸ್ತಕಗಳು ಹಾಗೂ ಅರ್ಜಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗಿದೆಯೇ ಎಂದು ಖಚಿತಪಡಿಸಕೊಳ್ಳಬೇಕು’ ಎಂದು ಹಿರಿಯ ನೋಂದಣಿ ಅಧಿಕಾರಿಗಳಿಗೆ ನಿರ್ದೇಶಿಸಿತು. 

ಎಂಜಲಿನ ಕಲೆ ಕಂಡು ಬರುವ ಯಾವುದೇ ದಾಖಲೆಗಳನ್ನು ಪರಿಗಣಿಸಬಾರದು ಹಾಗೂ ಸ್ವೀಕರಿಸಬಾರದು. ಆಯಾ ಅಧಿಕಾರಿಗಳು ನಿಯಮವನ್ನು ಪಾಲಿಸಬೇಕು.
ಅಲಹಾಬಾದ್‌ ಹೈಕೋರ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.