
ಅಲಹಾಬಾದ್ ಹೈಕೋರ್ಟ್
ಪ್ರಯಾಗರಾಜ್: ‘ಪಾಶ್ಚಿಮಾತ್ಯ ವಿಚಾರಗಳಿಂದ ಪ್ರೇರಣೆಗೊಂಡು ಯುವಕರು ಸಹಜೀವನ ನಡೆಸಲು ಮುಂದಾಗುತ್ತಿದ್ದಾರೆ. ಇಂಥ ಯುವಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕೊನೆಯಲ್ಲಿ ಸಂಬಂಧ ಸರಿಬರಲಿಲ್ಲ ಎಂದಾದರೆ, ಅತ್ಯಾಚಾರದ ಪ್ರಕರಣ ದಾಖಲಿಸುವುದು ಸರ್ವೇಸಾಮಾನ್ಯವಾಗಿದೆ’ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಯುವತಿಯನ್ನು ಅಪಹರಿಸಿ, ವ್ಯಕ್ತಿಯೊಬ್ಬರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮತ್ತು ಪ್ರಶಾಂತ್ ಮಿಶ್ರಾ ಅವರ ಪೀಠವು ತನ್ನ ತೀರ್ಪಿನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿತು.
‘ಎಲ್ಲ ಕಾನೂನುಗಳೂ ಮಹಿಳೆಯರ ಪರವಾಗಿಯೇ ಇವೆ. ಸಹಜೀವನ ಎಂಬ ಪರಿಕಲ್ಪನೆಯೇ ಇರದಿದ್ದ ಕಾಲದಲ್ಲಿ ರೂಪಿಸಿದ ಕಾನೂನಿನ ಆಧಾರದಲ್ಲಿ ಪುರುಷರಿಗೆ ಶಿಕ್ಷೆ ನೀಡಲಾಗುತ್ತಿದೆ’ ಎಂದು ಪೀಠ ಹೇಳಿತು.
ಪ್ರಕರಣವೇನು?: ಚಂದ್ರಶೇಖರ್ ಎಂಬುವರು ಪೋಷಕರಿಗೆ ಮಾಹಿತಿಯೇ ಇಲ್ಲದಂತೆ ಮದುವೆಯಾಗುವುದಾಗಿ ಬಾಲಕಿಯನ್ನು ಅಪಹರಿಸಿ ಉತ್ತರ ಪ್ರದೇಶದ ಗೋರಖಪುರದಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಇಲ್ಲಿ ಬಾಲಕಿಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ ಎಂದು ದೂರು ನೀಡಲಾಗಿತ್ತು. ಇದು 2021ರ ಪ್ರಕರಣ.
ಅಪಹರಣ, ಮದುವೆ ಆಗಲು ಅಪಹರಣ, ಪೋಕ್ಸೊ ಕಾಯ್ದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಕಾಯ್ದೆಗಳ ವಿವಿಧ ಸೆಕ್ಷನ್ಗಳ ಅನ್ವಯ ಚಂದ್ರಶೇಖರ್ ಅವರಿಗೆ ವಿಚಾರಣಾ ನ್ಯಾಯಾಲಯವೊಂದು ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಚಂದ್ರಶೇಖರ್ ಅವರು ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.