ಜಮ್ಮು: ಇಲ್ಲಿನ ಭಗವತಿ ನಗರದ ಶಿಬಿರದಿಂದ ವಾರ್ಷಿಕ ಅಮರನಾಥ ಯಾತ್ರೆಗೆ ಬುಧವಾರ ಮೊದಲ ತಂಡವು ಹೊರಡಲಿದ್ದು, ಇದೇ ಮೊದಲ ಬಾರಿಗೆ ಯಾತ್ರಾರ್ಥಿಗಳಿಗೆ ಬಹುಹಂತದ ಭದ್ರತೆಯನ್ನು ಒದಗಿಸಲಾಗಿದೆ.
ದಕ್ಷಿಣ ಕಾಶ್ಮೀರದಲ್ಲಿರುವ ಗುಹಾಂತರ ದೇವಾಲಯಕ್ಕೆ ತೆರಳಲು ಇದುವರೆಗೆ ದೇಶದಾದ್ಯಂತ 2 ಲಕ್ಷ ಯಾತ್ರಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ದೇಶದ ಮೂಲೆ
ಮೂಲೆಯಿಂದಸಾಧುಗಳು ಈಗಾಗಲೇ ಜಮ್ಮುವಿನತ್ತ ಆಗಮಿಸುತ್ತಿದ್ದಾರೆ.
‘ಬುಧವಾರ ಮುಂಜಾನೆ ಜಮ್ಮುವಿನಿಂದ ಹೊರಡಲಿರುವ ಮೊದಲ ತಂಡವು ಅನಂತನಾಗ್ ಜಿಲ್ಲೆಯ ನುನ್ವಾನ್–ಪಹಲ್ಗಾಂ ಹಾಗೂ ಗಂದೇರ್ಬಾಲ್ ಜಿಲ್ಲೆಯ ಬಲ್ಟಾಲ್ ಶಿಬಿರಕ್ಕೆ ರಾತ್ರಿ ವೇಳೆ ಬಂದು ತಲುಪಲಿದೆ. ಗುರುವಾರ ಇಲ್ಲಿಂದ 3,880 ಅಡಿ ಎತ್ತರದಲ್ಲಿರುವ ಶಿವಲಿಂಗದ ದರ್ಶನ ಪಡೆಯಲು ಕಾಲ್ನಡಿಗೆ ಮೂಲಕ ಭಕ್ತರು ಸಾಗಲಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 26ರಂದು ನಡೆಯುವ ‘ರಕ್ಷಾಬಂಧನ’ ಉತ್ಸವದಂದು ಯಾತ್ರೆಯು ಸಮಾಪ್ತಿಯಾಗಲಿದೆ.
‘ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಭ್ರಾತೃತ್ವ ಹಾಗೂ ಕೋಮುಸೌಹಾರ್ದ ಪ್ರತೀಕವಾಗಿರುವಯಾತ್ರೆಗೆ ಎಲ್ಲರೂ ಸಹಕರಿಸಬೇಕು’ ಎಂದು ಜಮ್ಮು ವಲಯದ ಐಜಿಪಿ ಎಸ್.ಡಿ.ಸಿಂಗ್ ಜಮ್ವಾಲ್ ತಿಳಿಸಿದರು.
ಗರಿಷ್ಠ ಭದ್ರತೆ: ಭಯೋತ್ಪಾದಕರ ದಾಳಿ ಭೀತಿ ಎದುರಾಗಿರುವುದರಿಂದ ಎಚ್ಚೆತ್ತಿರುವ ಕೇಂದ್ರ ಸರ್ಕಾರವು ಯಾತ್ರಾರ್ಥಿಗಳಿಗೆ ಗರಿಷ್ಠ ಭದ್ರತೆ ಒದಗಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.