ADVERTISEMENT

ಎನ್‌ಪಿಆರ್ ಬಗ್ಗೆ ಭಯಬೇಡ, ಯಾರನ್ನೂ ಸಂದೇಹಾಸ್ಪದ ಎಂದು ಗುರುತಿಸುವುದಿಲ್ಲ: ಶಾ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 16:32 IST
Last Updated 12 ಮಾರ್ಚ್ 2020, 16:32 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಅನುಷ್ಠಾನಕ್ಕೆ ಬರುವಾಗ ಯಾವೊಬ್ಬ ವ್ಯಕ್ತಿಯನ್ನು 'ಸಂದೇಹಾಸ್ಪದ 'ಕೆಟಗರಿಯಲ್ಲಿ ಗುರುತಿಸಲಾಗುವುದಿಲ್ಲ ಎಂದುಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಪಿಆರ್ ಜತೆಗೆ ಬಂದರೆ ಬಡವರು ಸಂಕಷ್ಟಕ್ಕೊಳಗಾಗುತ್ತಾರೆ ಎಂದು ಕಾಂಗ್ರೆಸ್ ಸಂಸದ ಕಪಿಲ್ ಸಿಬಲ್ ಆರೋಪಿಸಿದ್ದರು. ಈ ಆರೋಪಕ್ಕೆ ಗುರುವಾರ ರಾಜ್ಯಸಭೆಯಲ್ಲಿ ಉತ್ತರ ನೀಡಿದ ಶಾ, ನೋಂದಣಿ ಸಮಯದಲ್ಲಿ ಎಲ್ಲ ದಾಖಲೆಗಳನ್ನು ಸಲ್ಲಿಸದೆ ಇದ್ದರೆ ಅಂತವರನ್ನು 'ಡಿ' ಕೆಟಗರಿಯಡಿಯಲ್ಲಿಡಲಾಗುವುದಿಲ್ಲ ಎಂದು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ವಿಪಕ್ಷಗಳು ತಪ್ಪಾದ ಮಾಹಿತಿಯನ್ನು ಹಬ್ಬಿಸಿದ್ದೇ ದೆಹಲಿ ಗಲಭೆಗೆ ಕಾರಣ ಎಂದು ಹೇಳಿದ ಅಮಿತ್ ಶಾ, ಸಿಎಎಯಲ್ಲಿ ಪೌರತ್ವ ಕಿತ್ತುಕೊಳ್ಳುತ್ತೇವೆ ಎಂದು ಎಲ್ಲಿ ಹೇಳಿದ್ದೇವೆ, ಅದನ್ನು ತೋರಿಸಿ ಎಂದು ಮರು ಪ್ರಶ್ನೆ ಎಸೆದಿದ್ದಾರೆ.

ಇದಕ್ಕೆ ಉತ್ತರಿಸಿದ ಸಿಬಲ್, ಸಿಎಎ ಪೌರತ್ವವನ್ನು ಕಿತ್ತುಕೊಳ್ಳುತ್ತದೆ ಎಂದು ನಾವು ಹೇಳಲಿಲ್ಲ ಎಂದಾಗ, ನಿಮ್ಮ ಸಹೋದ್ಯೋಗಿಗಳು ಈ ರೀತಿ ಹೇಳಿದ್ದಾರೆ. ಸಿಎಎ ಮೂಲಕ ನಿರ್ದಿಷ್ಟ ಸಮುದಾಯವೊಂದರ ಪೌರತ್ವ ನಷ್ಟವಾಗಲಿದೆ ಎಂದು ಹೇಳಿರುವುದಾಗಿ ಆಡಳಿತರೂಢ ಪಕ್ಷದ ಸದಸ್ಯರು ಸದನದಲ್ಲಿ ಏರು ದನಿಯಲ್ಲಿ ಹೇಳುವ ಮೂಲಕಕಪಿಲ್ ಮಾತಿಗೆ ಅಡ್ಡಿಯುಂಟು ಮಾಡಿದರು.

ಸದನದಲ್ಲಿ ಗದ್ದಲ ಕೊಂಚ ಕಡಿಮೆಯಾದ ನಂತರ ಮಾತು ಮುಂದುವರಿಸಿದ ಸಿಬಲ್, ಸಿಎಎಯನ್ನು ಉಲ್ಲೇಖಿಸಿ ಎನ್‌ಪಿಆರ್‌ನ್ನು ನೋಡಬೇಕಿತ್ತು ಎಂದು ಹೇಳಿದ್ದಾರೆ.

ಎನ್‌ಪಿಆರ್ ಪ್ರಕ್ರಿಯೆ ನಡೆಯುವಾಗ ಹೆಚ್ಚುವರಿ 10 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗೆ ಮಾಹಿತಿ ಪಡೆಯುವ ಲೆಕ್ಕಿಗ (ಎನ್ಯುಮರೇಟರ್) ಆ ವ್ಯಕ್ತಿಯ ಹೆಸರಿನ ಮುಂದೆ ಸಂದೇಹಾಸ್ಪದ ( D -Doubtful) ಎಂದು ಗುರುತಿಸಿದರೆ ಆ ವ್ಯಕ್ತಿಯನ್ನು ಗುರಿಯಾಗಿರಿಸಲಾಗುತ್ತದೆ. ಸಿಎಎ ಮುಸ್ಲಿಂ ವಿರೋಧಿ ಅಲ್ಲ ಬಡವರ ವಿರೋಧಿಯಾಗಿದೆ ಎಂದು ಸಿಬಲ್ ಹೇಳಿದ್ದಾರೆ.

ಎನ್‌ಪಿಆರ್ ಪ್ರಕ್ರಿಯೆ ವೇಳೆ ಯಾವುದೇ ದಾಖಲೆ ಸಲ್ಲಿಸುವ ಅಗತ್ಯವಿಲ್ಲ ಎಂದು ಸರ್ಕಾರ ಹಲವಾರು ಬಾರಿ ಸ್ಪಷ್ಟನೆ ನೀಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಎನ್‌ಪಿಆರ್ ವೇಳೆ ಯಾವುದೇ ದಾಖಲೆ ಕೇಳುವುದಿಲ್ಲ. ಮಾಹಿತಿ ಇಲ್ಲದೇ ಅದನ್ನು ಅಧಿಕಾರಿಯೊಂದಿಗೆ ಹಂಚಿಕೊಳ್ಳುವುದೂ ಬೇಡ. ದೇಶದಲ್ಲಿರುಲ ಯಾರೊಬ್ಬರೂ ಎನ್‌ಪಿಆರ್ ಬಗ್ಗೆಭಯಪಡುವುದು ಬೇಡ ಎಂದು ಅಮಿತ್ ಶಾ, ಸಿಬಲ್ ಪ್ರಶ್ನೆಗೆ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.