ADVERTISEMENT

ಒಂದು ಅವಕಾಶ ಕೊಟ್ಟರೆ ಕೇರಳ ನಂ.1: ಅಮಿತ್‌ ಶಾ ಭರವಸೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 20:30 IST
Last Updated 7 ಮಾರ್ಚ್ 2021, 20:30 IST
ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ   

ತಿರುವನಂತಪುರ: ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟಗಳು ವರ್ಷಗಳ ಕಾಲ ಹಗರಣ ನಡೆಸಿವೆಯೇ ಹೊರತು ಕೇರಳದ ಅಭಿವೃದ್ಧಿ ನಡೆಸಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಭಾನುವಾರ ಆರೋಪಿಸಿದರು.

ರಾಜ್ಯದ ಜನರು ಬಿಜೆಪಿಗೆ ಐದು ವರ್ಷ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟರೆ, ಕೇರಳವನ್ನು ನಂಬರ್ 1 ಮಾಡುತ್ತೇವೆ ಎಂದು ಅವರು ಭರವಸೆಯಿತ್ತರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಅವರು ರಾಜ್ಯವ್ಯಾಪಿ ಕೈಗೊಂಡಿರುವ ‘ವಿಜಯ ಯಾತ್ರೆ’ಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕೇರಳಕ್ಕೆ ಕೇಂದ್ರ ಸರ್ಕಾರ ನೀಡಿರುವ ಕೊಡುಗೆಗಳನ್ನು ಪಟ್ಟಿ ಮಾಡಿದರು. ಸ್ವಾವಲಂಬಿ ಹೊಸ ಕೇರಳವನ್ನು ನಿರ್ಮಿಸುವ ಗುರಿಯನ್ನು ಬಿಜೆಪಿ ಹೊಂದಿದ್ದು, ಅವಕಾಶ ನೀಡುವಂತೆ ಮನವಿ ಮಾಡಿದರು.

ಪಕ್ಷಕ್ಕೆ ಇತ್ತೀಚೆಗೆ ಸೇರ್ಪಡೆಯಾಗಿರುವ ಇ.ಶ್ರೀಧರನ್ ಅವರು ತಮ್ಮ ಇಳಿವಯಸ್ಸಿನಲ್ಲಿಯೂ ದೇಶದ ಅಭಿವೃದ್ಧಿ ಯೋಜನೆಗಳನ್ನು ದೃಢಸಂಕಲ್ಪದಿಂದ ಜಾರಿ ಮಾಡಿದ್ದನ್ನು ಶಾ ಸ್ಮರಿಸಿದರು.

ADVERTISEMENT

ಸಿಪಿಎಂನಲ್ಲಿ ಟಿಕೆಟ್ ನೀಡಿಕೆ ಗೊಂದಲ
(ತಿರುವನಂತಪುರ ವರದಿ): ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಮುಖಂಡರ ಪತ್ನಿಯರನ್ನು ಕಣಕ್ಕಿಳಿಸುವ ವಿಚಾರ ಹಾಗೂ ಸಚಿವರೂ ಸೇರಿದಂತೆ ಪ್ರಮುಖರಿಗೆ ಟಿಕೆಟ್ ನಿರಾಕರಿಸಿರುವ ವಿಚಾರಗಳು ಸಿಪಿಎಂನಲ್ಲಿ ಕೋಲಾಹಲ ಎಬ್ಬಿಸಿವೆ. ಪ್ರತಿಭಟನೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.

ಕಾನೂನು ಸಚಿವ ಎ.ಕೆ. ಬಾಲನ್ ಅವರ ಪತ್ನಿ ಪಿ.ಕೆ. ಜಮೀಲಾ ಅವರನ್ನು ತರೂರ್‌ ಕ್ಷೇತ್ರದಿಂದ ಕಣಕ್ಕಿಳಿಸುವ ನಿರ್ಧಾರಕ್ಕೆ ವ್ಯಾಪಕ ಟೀಕೆ ಎದುರಾಗಿದೆ. ಸಚಿವರಾದ ಥಾಮಸ್ ಐಸಾಕ್, ಜಿ.ಸುಧಾಕರನ್ ಅವರಿಗೆ ಟಿಕೆಟ್ ನೀಡದಿರುವುದು ಗೊಂದಲ ಸೃಷ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.