ADVERTISEMENT

ಶಾಗೆ ಧೈರ್ಯವಿದ್ದರೆ 7 ರಾಜ್ಯಗಳ ಹಿಂಸಾಚಾರದ ತನಿಖೆಗೆ ಸಮಿತಿ ರಚಿಸಲಿ: ಗೆಹಲೋತ್

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಸವಾಲು

ಪಿಟಿಐ
Published 5 ಮೇ 2022, 11:03 IST
Last Updated 5 ಮೇ 2022, 11:03 IST
ಅಶೋಕ್ ಗೆಹಲೋತ್, ರಾಜಸ್ಥಾನ ಮುಖ್ಯಮಂತ್ರಿ
ಅಶೋಕ್ ಗೆಹಲೋತ್, ರಾಜಸ್ಥಾನ ಮುಖ್ಯಮಂತ್ರಿ   

ಜೈಪುರ: ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರಿಗೆ ಧೈರ್ಯವಿದ್ದರೆ, ರಾಜಸ್ಥಾನದ ಕರೌಲಿ ರೀತಿ ದೇಶದ 7 ರಾಜ್ಯಗಳಲ್ಲಿ ಕಳೆದ ತಿಂಗಳು ನಡೆದ ಹಿಂಸಾಚಾರ ಘಟನೆಗಳಿಗೆ ನಿಜವಾದ ಕಾರಣವೇನು ಎಂಬುದರ ತನಿಖೆಗೆ ಸಮಿತಿ ರಚಿಸಬೇಕು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಗುರುವಾರ ಸವಾಲು ಹಾಕಿದ್ದಾರೆ.

'ಈ ಹಿಂಸಾಚಾರದ ಘಟನೆಗಳಿಗೆ ನಿಜವಾದ ಕಾರಣವೇನು ಎಂದು ತಿಳಿಯಲು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಬೇಕು. ಈ ಕ್ರಮದಿಂದ ಹಿಂಸಾಚಾರಕ್ಕೆ ಕಾರಣವೇನು ಎಂಬುದು ಗೊತ್ತಾಗಲಿದೆ. ಜೊತೆಗೆ ಇಂಥ ಹಿಂಸಾಚಾರಗಳು ಮತ್ತೆ ಮರುಕಳಿಸುವುದಿಲ್ಲ' ಎಂದು ಹೇಳಿದರು.

ಮೇ 13ರಿಂದ 15ರವರೆಗೆ ನಡೆಯಲಿರುವ ಕಾಂಗ್ರೆಸ್ ಚಿಂತನ ಶಿಬಿರದ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ ಅವರು, ಧಾರ್ಮಿಕತೆ ಮತ್ತು ಜಾತಿ ಆಧಾರಿತ ರಾಜಕೀಯವು ದೇಶಕ್ಕೆ ಪ್ರಯೋಜನವಿಲ್ಲ ಎಂದು ಹೇಳಿದರು.

ADVERTISEMENT

ಏಪ್ರಿಲ್ 2ರಂದು ಹಿಂದೂಗಳ ಹೊಸ ವರ್ಷಾಚರಣೆ ಪ್ರಯುಕ್ತ ಕರೌಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೈಕ್ ರ‍್ಯಾಲಿ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದರು. ಈ ಘಟನೆಯಲ್ಲಿ ಹಲವು ವಾಹನಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಅಲ್ಲದೆ, 35 ಮಂದಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.