ADVERTISEMENT

ಅಮೃತಸರ ದಾಳಿಗೆ ಪಾಕಿಸ್ತಾನದಲ್ಲಿ ಸಂಚು: ಉನ್ನತ ಮೂಲಗಳಿಂದ ಮಾಹಿತಿ

ಖಲಿಸ್ತಾನ್ ಪರ ಗುಂಪು ಸಹ ಶಾಮೀಲು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 5:26 IST
Last Updated 21 ನವೆಂಬರ್ 2018, 5:26 IST
ಅಮೃತಸರ ಗ್ರೆನೇಡ್ ದಾಳಿಯಲ್ಲಿ ಗಾಯಗೊಂಡಿರುವ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದ ಸಂದರ್ಭ – ಪಿಟಿಐ ಸಂಗ್ರಹ ಚಿತ್ರ
ಅಮೃತಸರ ಗ್ರೆನೇಡ್ ದಾಳಿಯಲ್ಲಿ ಗಾಯಗೊಂಡಿರುವ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದ ಸಂದರ್ಭ – ಪಿಟಿಐ ಸಂಗ್ರಹ ಚಿತ್ರ   

ನವದೆಹಲಿ:ಅಮೃತಸರದಲ್ಲಿ ಪ್ರಾರ್ಥನಾ ಮಂದಿರದ ಮೇಲೆ ಭಾನುವಾರ ನಡೆದ ಗ್ರೆನೇಡ್ ದಾಳಿಗೆ ಪಾಕಿಸ್ತಾನದ ಲಾಹೋರ್‌ನಲ್ಲಿ ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ತನಿಖೆಯಿಂದ ಬಯಲಾಗಿದೆ.

ದಾಳಿಯಲ್ಲಿ ಕೆನಡಾ ಮತ್ತು ಜರ್ಮನಿಯಲ್ಲಿರುವ ಖಲಿಸ್ತಾನ್ ಪರ ಸಿಖ್ ಸಮುದಾಯದವರ ಕೈವಾಡವೂ ಇದೆ ಎಂಬುದಾಗಿ ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಭದ್ರತಾ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಘಟನೆ ಸಂಬಂಧ ಈಗಾಗಲೇ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ದಾಳಿಗೆಸ್ಥಳೀಯರ ನೆರವು ಪಡೆಯಲಾಗಿದೆ. ಶಸ್ತ್ರಾಸ್ತ್ರ ಸಾಗಣೆಗೆ ಇಸ್ಲಾಮಿಕ್ ಉಗ್ರ ಜಾಲವನ್ನು ಬಳಸಿಕೊಳ್ಳಲಾಗಿದೆ. ಇದು ಪಂಜಾಬ್‌ನಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ಪುನರುಜ್ಜೀವಗೊಳಿಸುವ ಹತಾಶ ಯತ್ನ ಎಂದು ಅಧಿಕಾರಿಗಳು ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.

ಅಮೃತಸರದನಿರಂಕಾರಿ ಮಂದಿರದ ಬಳಿ ನಡೆದ ದಾಳಿಗೆ ಸಂಬಂಧಿಸಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಮಂಗಳವಾರ ದೆಹಲಿಯಲ್ಲಿ ಸಭೆ ಕರೆದಿದ್ದರು. ದಾಳಿಗೆ ಪಾಕಿಸ್ತಾನದಲ್ಲೇ ಸಂಚು ರೂಪಿಸಲಾಗಿದೆ ಹಾಗೂ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐನ ನೇರ ಕೈವಾಡವಿದೆ ಎಂಬ ಬಗ್ಗೆ ಈ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ. ಗೃಹ ಕಾರ್ಯದರ್ಶಿ ರಾಜೀವ್ ಗೌಬಾ, ಪಂಜಾಬ್ ಡಿಜಿಪಿ ಸುರೇಶ್ ಅರೋರಾ ಮತ್ತು ಗುಪ್ತಚರ ಏಜೆನ್ಸಿಗಳ ಮುಖ್ಯಸ್ಥರು ಸಭೆಯಲ್ಲಿ ಹಾಜರಿದ್ದರು.

ದಾಳಿಗೆ ಬಳಸಲಾಗಿರುವ ಗ್ರೆನೇಡ್‌ ಪಾಕಿಸ್ತಾನದಲ್ಲಿ ತಯಾರಾಗಿದೆ ಎಂಬುದುವಿಧಿವಿಜ್ಞಾನ ವಿಶ್ಲೇಷಣೆಯಿಂದ ತಿಳಿದುಬಂದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾಗಿಯೂ ವರದಿ ಉಲ್ಲೇಖಿಸಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.