ADVERTISEMENT

ಅನಜ್‌ ಮಂಡಿ ಅಗ್ನಿ ದುರಂತ: ಕೇಂದ್ರ, ದೆಹಲಿ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಅನಾಜ್‌ ಮಂಡಿ ಪ್ರದೇಶದ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರು

ಪಿಟಿಐ
Published 12 ಡಿಸೆಂಬರ್ 2019, 20:00 IST
Last Updated 12 ಡಿಸೆಂಬರ್ 2019, 20:00 IST
   

ನವದೆಹಲಿ: ಬೆಂಕಿ ಅವಘಡ ಸಂಭವಿಸಿದ್ದ ಇಲ್ಲಿನ ಅನಾಜ್‌ ಮಂಡಿ ಪ್ರದೇಶದ ಕಾರ್ಖಾನೆಯಲ್ಲಿ ಬಾಲ ಕಾರ್ಮಿಕರಿದ್ದರು ಎಂದು ಆರೋಪಿಸಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌, ಕೇಂದ್ರ ಹಾಗೂ ದೆಹಲಿ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.

‘ಬಚ್‌ಪನ್‌ ಬಚಾವೋ ಆಂದೋಲನ’ ಎಂಬ ಸರ್ಕಾರೇತರ ಸಂಸ್ಥೆ(ಎನ್‌ಜಿಒ) ಸಲ್ಲಿಸಿದ್ದ ಅರ್ಜಿವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎನ್‌.ಪಟೇಲ್‌ ಹಾಗೂ ನ್ಯಾಯಮೂರ್ತಿ ಸಿ.ಹರಿಶಂಕರ್‌ ಅವರಿದ್ದ ಪೀಠವು, ಕೇಂದ್ರ ಸರ್ಕಾರ, ದೆಹಲಿಯ ಎಎಪಿ ಸರ್ಕಾರ, ಪೊಲೀಸ್‌ ಹಾಗೂ ಬಿಹಾರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಎನ್‌ಜಿಒ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಚ್‌.ಎಸ್‌.ಫೂಲ್ಕ, ‘ಘಟನೆಯಲ್ಲಿ ಮೃತಪಟ್ಟ, ಗಾಯಗೊಂಡ ಹಾಗೂ ನಾಪತ್ತೆಯಾದ ಕಾರ್ಮಿಕರ ಪೈಕಿ ಹಲವರು ಬಾಲ ಕಾರ್ಮಿಕರಾಗಿದ್ದರು’ ಎಂದು ತಿಳಿಸಿದರು. ‘ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಪೈಕಿ ಬಾಲ ಕಾರ್ಮಿಕರಿದ್ದರೇ? ಎನ್ನುವುದರ ಕುರಿತು ಸೂಕ್ತ ತನಿಖೆ ನಡೆಸಲು ಸಂಬಂಧಿಸಿದ ಇಲಾಖೆಗೆ ಸೂಚಿಸಬೇಕು’ ಎಂದು ಎನ್‌ಜಿಒ ಮನವಿ ಸಲ್ಲಿಸಿದೆ.

ADVERTISEMENT

ವಾರ್ಡ್‌ನಿಂದ ನಾಪತ್ತೆ: ‘ಎಲ್‌ಎನ್‌ಜೆಪಿ ಆಸ್ಪತ್ರೆಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕ ನಾಪತ್ತೆಯಾಗಿದ್ದಾನೆ. ಇದು ಮಕ್ಕಳ ಕಳ್ಳಸಾಗಣೆಗೆ ಸಾಕ್ಷ್ಯ. ಇದು ಸರ್ಕಾರಕ್ಕೆ ತಿಳಿದಿದ್ದರೂ, ಇದನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ’ ಎಂದು ಎನ್‌ಜಿಒ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.