ADVERTISEMENT

ದೆಹಲಿಯ ಅನಾಜ್‌ ಮಂಡಿಯಲ್ಲಿ ಮತ್ತೆ ಬೆಂಕಿ ಅವಘಡ

ಪಿಟಿಐ
Published 9 ಡಿಸೆಂಬರ್ 2019, 20:00 IST
Last Updated 9 ಡಿಸೆಂಬರ್ 2019, 20:00 IST
ಅವಘಡದಲ್ಲಿ ಮೃತಪಟ್ಟ ಮೊಹಮ್ಮದ್‌ ಮುಶ್ರಫ್‌ ಎಂಬುವವರ ತಾಯಿ ಶವಾಗಾರದ ಮುಂಭಾಗದಲ್ಲಿ ರೋಧಿಸುತ್ತಿದ್ದ ದೃಶ್ಯ – ಪಿಟಿಐ ಚಿತ್ರ
ಅವಘಡದಲ್ಲಿ ಮೃತಪಟ್ಟ ಮೊಹಮ್ಮದ್‌ ಮುಶ್ರಫ್‌ ಎಂಬುವವರ ತಾಯಿ ಶವಾಗಾರದ ಮುಂಭಾಗದಲ್ಲಿ ರೋಧಿಸುತ್ತಿದ್ದ ದೃಶ್ಯ – ಪಿಟಿಐ ಚಿತ್ರ   

ನವದೆಹಲಿ: ಬೆಂಕಿ ಅವಘಡದಲ್ಲಿ 43 ಜನರನ್ನು ಬಲಿ ತೆಗೆದುಕೊಂಡ ಇಲ್ಲಿನ ಅನಾಜ್‌ ಮಂಡಿ ಪ್ರದೇಶದಲ್ಲಿರುವ ಬಹುಮಹಡಿ ಕಟ್ಟಡದಲ್ಲಿ, ಸೋಮವಾರ ಬೆಳಗ್ಗೆ ಮತ್ತೆ ಬೆಂಕಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

‘ಸೋಮವಾರ ಬೆಳಗ್ಗೆ 7.50ರ ಸುಮಾರಿಗೆ ಬೆಂಕಿ ಅವಘಡದ ಬಗ್ಗೆ ಮಾಹಿತಿ ದೊರೆಯಿತು. ಸುಮಾರು 20 ನಿಮಿಷಗಳ ಪ್ರಯತ್ನದ ನಂತರ ಬೆಂಕಿ ಹತೋಟಿಗೆ ತರಲಾಯಿತು’ ಎಂದು ದೆಹಲಿ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದರು.

ಅವಘಡ ಮರುಕಳಿಸದಂತೆ ಕ್ರಮಕೈಗೊಳ್ಳಿ: ಅವಘಡದ ಬಗ್ಗೆ ರಾಜ್ಯಸಭೆ ಸದಸ್ಯರು ಸೋಮವಾರ ಸಂತಾಪ ವ್ಯಕ್ತಪಡಿಸಿ, ಮೌನಾಚರಣೆ ನಡೆಸಿದರು. ಇಂಥ ಅವಘಡಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಆಗ್ರಹಿಸಿದರು.

ADVERTISEMENT

ನಾಪತ್ತೆಯಾಗಿದ್ದ ಯುವಕ ಶವಾಗಾರದಲ್ಲಿ!: ಭಾನುವಾರ ಬೆಳಗ್ಗಿನಿಂದ ಬಿಹಾರದ ಸಮಸ್ತಿಪುರದ14 ವರ್ಷದ ಮೊಹಮ್ಮದ್‌ ಸೆಹಮತ್‌ ಎಂಬಾತನನ್ನು ಕುಟುಂಬದ ಸದಸ್ಯರು ಹುಡುಕಾಡಿ ಸುಸ್ತಾಗಿದ್ದರು. ‘ಸೋಮವಾರ ಮಧ್ಯಾಹ್ನ ಎಲ್‌ಎನ್‌ಜೆಪಿ ಆಸ್ಪತ್ರೆ ಶವಾಗಾರದಲ್ಲಿ ಸೆಹಮತ್‌ ಮೃತದೇಹವನ್ನು ಗುರುತು ಹಚ್ಚಿದೆವು’ ಎಂದು ಸಮಸ್ತಿಪುರದ ನಿವಾಸಿ ಮೊಹಮ್ಮದ್‌ ಅರ್ಮಾನ್‌ ಹೇಳಿದರು.

ಆಸ್ಪತ್ರೆಯಲ್ಲಿ ಅಸ್ತವ್ಯಸ್ತ ಸ್ಥಿತಿ: ಮರಣೋತ್ತರ ಪರೀಕ್ಷೆ ನಡೆದ ಮೌಲಾನ ಆಜಾದ್‌ ಆಸ್ಪತ್ರೆಯಲ್ಲಿ ಸೋಮವಾರ ಅಸ್ತವ್ಯಸ್ತ ಸ್ಥಿತಿ ನಿರ್ಮಾಣವಾಗಿತ್ತು. ಮೃತದೇಹಗಳ ರವಾನೆಗೆ ಪ್ರತ್ಯೇಕ ಆಂಬುಲೆನ್ಸ್‌ ವ್ಯವಸ್ಥೆ ಕಲ್ಪಿಸುವ ಭರವಸೆ ಯನ್ನು ದೆಹಲಿ ಸಚಿವ ಇಮ್ರಾನ್‌ ಹುಸೇನ್‌ ನೀಡಿದ್ದರು. ಆದರೆ ಈ ವ್ಯವಸ್ಥೆ ಕಲ್ಪಿಸದೇ ಇದ್ದ ಕಾರಣ ಆಸ್ಪತ್ರೆ ಅಧಿಕಾರಿಗಳು ಹಾಗೂ ಮೃತರ ಕುಟುಂಬ ಸದಸ್ಯರ ನಡುವೆ ವಾಗ್ವಾದ ಉಂಟಾಯಿತು.

***

ಅವಘಡ ಸಂಭವಿಸಿದ ಕಟ್ಟಡ ಆಮ್‌ ಆದ್ಮಿ ಪಕ್ಷದ ಸದಸ್ಯನಿಗೆ ಸೇರಿದ್ದು, ಘಟನೆ ಬಗ್ಗೆ ಮಾಹಿತಿ ಸಂಗ್ರಹಕ್ಕೆ ನಿವೃತ್ತ ಹೈಕೋರ್ಟ್‌ ನ್ಯಾಯಾಧೀಶ ಮೂಲ್‌ಚಂದ್‌ ಗರ್ಗ್‌ ನೇತೃತ್ವದಲ್ಲಿ ಬಿಜೆಪಿ ಸಮಿತಿ ರಚಿಸಿದೆ
- ಮನೋಜ್‌ ತಿವಾರಿ, ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.