ಅಮರಾವತಿ (ಆಂಧ್ರಪ್ರದೇಶ): ವಿಧಾನ ಪರಿಷತ್ ಸಭಾಪತಿ ‘ಮೂರು ರಾಜಧಾನಿ’ ಮಸೂದೆಯನ್ನು ಅದರ ಆಯ್ಕೆ ಸಮಿತಿಯ ವಿವೇಚನಾಧಿಕಾರಕ್ಕೆ ವಹಿಸಿದ ನಂತರ ವಿಧಾನ ಪರಿಷತ್ ಅನ್ನು ರದ್ದುಗೊಳಿಸುವ ಇಂಗಿತವನ್ನುಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ವ್ಯಕ್ತಪಡಿಸಿದ್ದಾರೆ.
ರಾಜ್ಯ ವಿಧಾನ ಸಭೆಯಲ್ಲಿ ಈ ಮಸೂದೆ ಸೋಮವಾರ ಅಂಗೀಕಾರವಾಗಿತ್ತು. ಆದರೆ, ವಿಧಾನ ಪರಿಷತ್ನಲ್ಲಿ ಜಗನ್ ನೇತೃತ್ವd ವೈಎಸ್ಆರ್ ಕಾಂಗ್ರೆಸ್ಗೆ ಬಹುಮತ ಇಲ್ಲ. ಇಲ್ಲಿ ಮಸೂದೆಗೆ ಪ್ರಮುಖ ವಿರೋಧ ಪಕ್ಷ ತೆಲುಗು ದೇಶಂ ಪಕ್ಷ ವಿರೋಧ ವ್ಯಕ್ತಪಡಿಸಿತ್ತು. ಮಸೂದೆಯನ್ನು ಚರ್ಚೆಗೆ ಎತ್ತಿಕೊಳ್ಳುವ ಮುನ್ನ ನಿಯಮ 71ರ ಅಡಿಯಲ್ಲಿ ನೀಡುವ ನೋಟಿಸ್ ಕುರಿತು ಚರ್ಚೆ ನಡೆಸಬೇಕು ಎಂದು ಟಿಡಿಪಿ ಸೂಚಿಸಿತ್ತು.
ಟಿಡಿಪಿ ಆಗ್ರಹವನ್ನು ಪರಿಷತ್ ಅಧ್ಯಕ್ಷರು ಒಪ್ಪಿಕೊಂಡಿದ್ದಕ್ಕೆ ವೈಎಸ್ಆರ್ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪರಿಷತ್ತ್ ಅನ್ನು ಮುಂದುವರಿಸುವುದೇ ಅಥವಾ ರದ್ದುಪಡಿಸಬೇಕೆ ಎನ್ನುವ ಬಗ್ಗೆ ಸೋಮವಾರ ಚರ್ಚಿಸಲು ಅನುಮತಿ ಕೊಡಬೇಕು ಎಂದು ಜಗನ್ ಮೋಹನ್ ರೆಡ್ಡಿ ಸಭಾಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ.
ಹಣಕಾಸು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬುಗ್ಗಣ್ಣ ರಾಜೇಂದ್ರನಾಥ್, ‘ವಿಕೇಂದ್ರಿಕರಣ ಮತ್ತು ಸಮಗ್ರ ಅಭಿವೃದ್ಧಿ ಮಸೂದೆ ಮತ್ತು ಆಂಧ್ರಪ್ರದೇಶ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ ಮಸೂದೆ ಈ ಎರಡನ್ನು ಆಯ್ಕೆ ಸಮಿತಿಗೆ ವಹಿಸಿರುವ ಹಿಂದೆ ಸಂಚು ಇದೆ. ಜೊತೆಗೆ ಸರಿಯಾದ ಕ್ರವವನ್ನೂ ಅನುಸರಿಸಲಾಗಿಲ್ಲ’ ಎಂದು ಹೇಳಿದರು.
ಇದರಿಂದ ಸದನದಲ್ಲಿ ಕೋಲಾಹಲ ಉಂಟಾಯಿತು. ಈ ಕಾರಣಕ್ಕೆ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು. ಸದನ ಮರು ಆರಂಭವಾಗುತ್ತಿದ್ದಂತೆ ಟಿಡಿಪಿ ಸದಸ್ಯ ವೈ ರಾಜೇಂದ್ರ ಪ್ರಸಾದ್ ಮಾತನಾಡುವಂತೆ ಅಧ್ಯಕ್ಷರು ಹೇಳಿದರು. ಇದಕ್ಕೆ ಆಡಳಿತಾರೂಢ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಯಿತು. ಕೆಲವು ಸಚಿವರು ಪ್ರತಿಭಟನೆ ನಡೆಸಿದರು. ಇದರಿಂದ ಸದನವನ್ನು ಮತ್ತೊಮ್ಮೆ ಮುಂದೂಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.