ಮುಂಬೈ: ಮಹಾರಾಷ್ಟ್ರದ ಗೃಹ ಸಚಿವರಾಗಿದ್ದ ಅನಿಲ್ ದೇಶಮುಖ್ ಅವರು ಮುಂಬೈನ ಬಾರ್ ಮಾಲೀಕರಿಂದ ₹ 4 ಕೋಟಿ ಪಡೆದು, ಆ ಹಣವನ್ನು ತಮ್ಮ ಟ್ರಸ್ಟ್ ಮೂಲಕ ವಿವಿಧ ಡಮ್ಮಿ ಕಂಪನಿಗಳಿಗೆ ದೇಣಿಗೆ ಹೆಸರಲ್ಲಿ ವರ್ಗಾವಣೆ ಮಾಡಿದ್ದರು ಎಂದು ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ನ್ಯಾಯಾಲಯಕ್ಕೆ ತಿಳಿಸಿದೆ.
ದೇಶಮುಖ್ ಅವರ ವೈಯಕ್ತಿಕ ಕಾರ್ಯದರ್ಶಿ ಸಂಜೀವ್ ಪಾಲಂಡೆ ಮತ್ತು ವೈಯಕ್ತಿಕ ಸಹಾಯಕ ಕುಂದನ್ ಶಿಂಧೆ ಅವರ ವಿಚಾರಣೆಯ ವೇಳೆ ಇಡಿ ಈ ಹೇಳಿಕೆ ನೀಡಿದೆ. ಏಪ್ರಿಲ್ನಲ್ಲಿ ದೇಶಮುಖ್ ರಾಜೀನಾಮೆ ನೀಡಲು ಕಾರಣವಾದ ಬಹುಕೋಟಿ ಲಂಚ ಮತ್ತು ಸುಲಿಗೆ ದಂಧೆಗೆ ಸಂಬಂಧಿಸಿದ ಹಣ ವರ್ಗಾವಣೆ ಆರೋಪದ ಮೇಲೆ ಪಿಎಂಎಲ್ಎ ಕಾಯ್ದೆಯಡಿ ಪಾಲಂಡೆ ಮತ್ತು ಶಿಂಧೆ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 1ರವರೆಗೆ ಇವರಿಬ್ಬರನ್ನು ಇಡಿ ಕಸ್ಟಡಿಗೆ ನೀಡಲಾಗಿದೆ. ದೇಶಮುಖ್ ಅವರನ್ನು ಇಂದು ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಬಲ್ಲಾರ್ಡ್ ಎಸ್ಟೇಟ್ನ ಇಡಿ ಕಚೇರಿಯಲ್ಲಿ ತನಿಖಾ ಅಧಿಕಾರಿಯ ಮುಂದೆ ಹಾಜರಾಗಲು ತಿಳಿಸಲಾಗಿತ್ತು. ಆದರೆ, ಅಧಿಕಾರಿಗಳ ಮುಂದೆ ಹಾಜರಾಗಲು ಹೊಸ ದಿನಾಂಕ ಕೋರಿ ದೇಶಮುಖ್ ಪರ ವಕೀಲರ ತಂಡವು ಇಡಿಗೆ ಮನವಿ ಸಲ್ಲಿಸಿದೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ದೇಶಮುಖ್ಗೆ ಸಹಾಯ ಮಾಡುವಲ್ಲಿ ಪಾಲಂಡೆ ಮತ್ತು ಶಿಂಧೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಇಡಿ, ನ್ಯಾಯಾಲಯಕ್ಕೆ ತಿಳಿಸಿದೆ.
ಲಂಚ ಪ್ರಕರಣಕ್ಕೆ ಸಿಬಿಐ, ಪ್ರಾಥಮಿಕ ವಿಚಾರಣೆ ನಡೆಸಿದ ನಂತರ ಬಾಂಬೆ ಹೈಕೋರ್ಟ್ನ ಆದೇಶದ ಮೇರೆಗೆ ದೇಶಮುಖ್ ಮತ್ತು ಇತರರ ವಿರುದ್ಧದ ಇಡಿ ಪ್ರಕರಣವನ್ನು ದಾಖಲಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.