ADVERTISEMENT

ಕಾಶ್ಮೀರಿ ಪಂಡಿತರ ಕುರಿತ ‘ಶಿಕಾರ’ ಚಿತ್ರ ನಿಷೇಧಕ್ಕೆ ಅರ್ಜಿ 

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 14:27 IST
Last Updated 4 ಫೆಬ್ರುವರಿ 2020, 14:27 IST
   

ಶ್ರೀನಗರ: 1990ರಲ್ಲಿ ಕಾಶ್ಮೀರ ಕಣಿವೆಯಿಂದ ಹೊರ ಹೋದ ಕಾಶ್ಮೀರಿ ಪಂಡಿತರು ಕುರಿತು ನಿರ್ಮಿಸಿರುವ ಶಿಕಾರ ಚಿತ್ರವನ್ನು ಬಿಡುಗಡೆ ಮಾಡದಂತೆ ಕೋರಿ ಮೂವರು ರಾಜಕೀಯ ಕಾರ್ಯಕರ್ತರು ಜಮ್ಮು–ಕಾಶ್ಮೀರದ ಹೈಕೋರ್ಟ್‌ಗೆ ಮಂಗಳವಾರ ಅರ್ಜಿ ಸಲ್ಲಿಸಿದ್ದಾರೆ.

ಮಜೀದ್‌ ಹೈದರಿ, ಇರ್ಫಾನ್‌ ಹಫೀಜ್‌ ಲೋನ್‌, ಇಫ್ತಾಖರ್‌ ಮಿಸ್ಗರ್‌ ಅವರು ಕಾಶ್ಮೀರ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದು, ಕಾಶ್ಮೀರಿ ಪಂಡಿತರು ಹಾಗೂ ಕಾಶ್ಮೀರದ ಬಗ್ಗೆ ಸುಳ್ಳು ಸಂಗತಿಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ದೂರಿದ್ದಾರೆ.

ಫೆಬ್ರುವರಿ 7ರಂದು ತೆರೆ ಕಾಣಲಿರುವ ಚಿತ್ರವನ್ನು ನಿಷೇಧ ಮಾಡಬೇಕು. ಚಿತ್ರದಲ್ಲಿ ಕಾಶ್ಮೀರಿ ಮುಸ್ಲಿಂ ಸಮುದಾಯವನ್ನು ನಕಾರಾತ್ಮಕವಾಗಿ ಬಿಂಬಿಸಿರುವ ದೃಶ್ಯಗಳನ್ನು ತೆಗೆಯಬೇಕು. ಇಲ್ಲದಿದ್ದಲ್ಲಿ ಇದು ಸಮುದಾಯಗಳ ಧ್ರುವಿಕರಣಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಚಿತ್ರವು ಉಗ್ರರು ಹಾಗೂ ಕಾಶ್ಮೀರದಲ್ಲಿನ ಜನಸಾಮಾನ್ಯರನ್ನು ಬೇರ್ಪಡಿಸುವ ಉದ್ದೇಶ ಹೊಂದಿಲ್ಲ. ಕಾಶ್ಮೀರಿ ಪಂಡಿತರು ಈ ಪ್ರದೇಶವನ್ನು ಬಿಟ್ಟು ಹೋಗದಂತೆ ಸ್ಥಳೀಯರು ಮನವೊಲಿಸಿದ್ದರು. ಆದರೆ ಚಿತ್ರದಲ್ಲಿ ಕಾಶ್ಮೀರಿ ಪಂಡಿತರು ಈ ಪ್ರದೇಶವನ್ನು ತೊರೆಯಲು ಇಡೀ ಕಾಶ್ಮೀರಿ ಮುಸ್ಲಿಂ ಸಮುದಾಯ ಕಾರಣ ಎಂಬಂತೆ ಚಿತ್ರಿಸಲಾಗಿದೆ ಎಂದು ದೂರಿದರು.

ವಿಧು ವಿನೋದ ಛೋಪ್ರಾ ನಿರ್ದೇಶನ ಹಾಗೂ ಅಶೋಕ್‌ ಪಂಡಿತ್‌ ನಿರ್ಮಾಣದ ಶಿಕಾರ ಚಿತ್ರದ ಟ್ರೇಲರ್‌ ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರವು ಫೆಬ್ರುವರಿ 7ರಂದು ಬಿಡುಗಡೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.