ADVERTISEMENT

ಕತಾರ್‌ | ನೌಕಾಪಡೆಯ 8 ಮಾಜಿ ಸಿಬ್ಬಂದಿಗೆ ಮರಣದಂಡನೆ: ಮೇಲ್ಮನವಿ ಸಲ್ಲಿಸಿದ ಭಾರತ

ಭಾರತೀಯರಿಗೆ ಮರಣ ದಂಡನೆ ಪ್ರಕರಣ

ಪಿಟಿಐ
Published 9 ನವೆಂಬರ್ 2023, 15:58 IST
Last Updated 9 ನವೆಂಬರ್ 2023, 15:58 IST
ಅರಿಂದಮ್ ಬಾಗ್ಚಿ
ಅರಿಂದಮ್ ಬಾಗ್ಚಿ   

ನವದೆಹಲಿ: ಭಾರತೀಯ ನೌಕಾಪಡೆಯ 8 ಮಾಜಿ ಸಿಬ್ಬಂದಿ ಕತಾರ್‌ ನ್ಯಾಯಾಲಯವೊಂದರಿಂದ ಮರಣ ದಂಡನೆಗೆ ಗುರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಹೇಳಿದೆ.

ಮರಣ ದಂಡನೆಗೆ ಗುರಿಯಾಗಿರುವ ನೌಕಾಪಡೆಯ ಮಾಜಿ ಸಿಬ್ಬಂದಿಗೆ ಭಾರತವು ಎಲ್ಲ ರೀತಿಯ ಕಾನೂನು ಹಾಗೂ ಕಾನ್ಸುಲರ್ ನೆರವು ನೀಡಲಿದೆ ಎಂದು ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ತಿಳಿಸಿದ್ದಾರೆ.

ಕತಾರ್‌ನ ದೋಹಾದಲ್ಲಿರುವ ಭಾರತದ ರಾಯಭಾರ ಕಚೇರಿಯು ಬಂಧಿತ ಎಲ್ಲ ಭಾರತೀಯರನ್ನು ಮಂಗಳವಾರ ಸಂಪರ್ಕಿಸಿ, ಮಾತುಕತೆ ನಡೆಸಿದೆ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

‘ನ್ಯಾಯಾಲಯದ ತೀರ್ಪು ಗೌಪ್ಯ ದಾಖಲೆಯಾಗಿರುವ ಕಾರಣ, ಅದನ್ನು ಕಾನೂನು ಹೋರಾಟ ನಡೆಸುವ ತಂಡದೊಂದಿಗೆ ಮಾತ್ರ ಹಂಚಿಕೊಳ್ಳಲಾಗಿದೆ. ಈ ತಂಡವು ಕತಾರ್‌ನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮೇಲ್ಮನವಿ ಸಲ್ಲಿಕೆ ಸೇರಿದಂತೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ’ ಎಂದೂ ಅವರು ಹೇಳಿದರು.

‘ಈ ಪ್ರಕರಣ ಬಹಳ ಸೂಕ್ಷ್ಮವಾಗಿರುವ ಕಾರಣ, ಊಹಾಪೋಹಗಳಲ್ಲಿ ತೊಡಗದಂತೆ ಎಲ್ಲರನ್ನು ಒತ್ತಾಯಿಸುತ್ತೇನೆ’ ಎಂದು ಬಾಗ್ಚಿ ಹೇಳಿದರು.

ಕತಾರ್‌ನ ಅಲ್‌ ದಹ್ರಾ ಎಂಬ ಖಾಸಗಿ ಕಂಪನಿಯಲ್ಲಿ, ನೌಕಾಪಡೆಯ ಈ 8 ಜನ ಮಾಜಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು. ಬೇಹುಗಾರಿಕೆ ಆರೋಪದಡಿ ಇವರನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.