ತಿರುವನಂತಪುರ: ಹಿರಿಯ ಪುರಾತತ್ವ ಶಾಸ್ತ್ರಜ್ಞ, ಭಾರತೀಯ ಪುರಾತತ್ವ ಇಲಾಖೆಯ ಉತ್ತರ ವಿಭಾಗದ ವಿಭಾಗೀಯ ನಿರ್ದೇಶಕರಾಗಿ ನಿವೃತ್ತಿ ಹೊಂದಿರುವ ಕೆ.ಕೆ. ಮೊಹಮ್ಮದ್ ಅವರಲ್ಲಿ ಅಯೋಧ್ಯೆ ವಿವಾದವನ್ನು ಕುರಿತ ತೀರ್ಪು ಒಂದು ರೀತಿಯ ತೃಪ್ತಿಯ ಭಾವವನ್ನು ಮೂಡಿಸಿದೆ.
ಅಯೋಧ್ಯೆಯಲ್ಲಿ ಸರ್ವೇಕ್ಷಣೆ ನಡೆಸಿದ್ದ ತಂಡದಲ್ಲಿ ಅವರು ಇದ್ದರು ಎಂಬುದು ಒಂದು ಕಾರಣ. ಈ ತೀರ್ಪಿನಿಂದ ಪುರಾತತ್ವ ವಿಜ್ಞಾನದ ಮಹತ್ವ ಏನೆಂಬುದನ್ನು ಮತ್ತೊಮ್ಮೆ ಸಾರಿದಂತಾಗಿದೆ ಎಂಬುದು ಅವರ ಸಂತೃಪ್ತಿಗೆ ಇನ್ನೊಂದು ಕಾರಣ. ಮೊಹಮ್ಮದ್, ಕೇರಳದ ಕೋಯಿಕ್ಕೋಡ್ ಮೂಲದವರು. ಅಯೋಧ್ಯೆಯಲ್ಲಿ ರಾಮಮಂದಿರವಿತ್ತು ಎಂಬುದನ್ನು ಸಾಬೀತು ಪಡಿಸುವಲ್ಲಿ ಇವರು ನಡೆಸುವ ಸಂಶೋಧನೆ ಮಹತ್ವದ್ದಾಗಿತ್ತು.
‘1976–77ರಲ್ಲಿ ನಾನು ಅಯೋಧ್ಯೆಯಲ್ಲಿದೆ. ಮುಂಜಾನೆಯಿಂದಲೂ ಅಲ್ಲಿ ಭಕ್ತಿಗೀತೆಗಳು ಮೊಳಗುತ್ತಿದ್ದವು. ದೂರದೂರದಿಂದ ಭಕ್ತರು ಬರುತ್ತಿದ್ದರು. ಮುಸ್ಲಿಮರಿಗೆ ಮಕ್ಕಾ ಇದ್ದಂತೆ, ಹಿಂದೂಗಳಿಗೆ ಅಯೋಧ್ಯೆ ಪವಿತ್ರ ಸ್ಥಾನ. ಮುಸ್ಲಿಮರೂ ಅದನ್ನು ಮನಗಂಡಿದ್ದರು. ಆದರೆ ಹುಸಿ ಪ್ರಚಾರಗಳು ಪರಿಸ್ಥಿತಿಯನ್ನು ಹದಗೆಡಿಸಿದವು. ಈಗ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಅತ್ಯಂತ ಸಮತೋಲಿತವಾಗಿದೆ’ ಎಂದು ಮೊಹಮ್ಮದ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.