ADVERTISEMENT

ದೆಹಲಿ ಗಡಿ ನಾಳೆಯಿಂದ ಮುಕ್ತ, ಸ್ಥಳೀಯರಿಗೆ ಮಾತ್ರ ಚಿಕಿತ್ಸೆ: ಅರವಿಂದ ಕೇಜ್ರಿವಾಲ್

ದೆಹಲಿ ಸಚಿವ ಸಂಪುಟ ತೀರ್ಮಾನ

ಏಜೆನ್ಸೀಸ್
Published 7 ಜೂನ್ 2020, 8:17 IST
Last Updated 7 ಜೂನ್ 2020, 8:17 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್   

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಬೆಡ್‌ಗಳನ್ನು ಸ್ಥಳೀಯ ರೋಗಿಗಳ ಬಳಕೆಗೆ ಮೀಸಲಿಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ಸರ್ಕಾರದ ಈ ನಿರ್ಧಾರವು ಕೇಂದ್ರ ಸರ್ಕಾರ ನಿರ್ವಹಿಸುವ ಏಮ್ಸ್, ಸಫ್ದರ್‌ಜಂಗ್‌ ಆಸ್ಪತ್ರೆಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇತರ ರಾಜ್ಯಗಳ ಜನರು ನಗರ ಪ್ರವೇಶಿಸಲು ಗಡಿಯನ್ನು ಮುಕ್ತಗೊಳಿಸಲಾಗುವುದು. ನಗರದ ಆಸ್ಪತ್ರೆಗಳು ಇತರ ರಾಜ್ಯಗಳ ಜನರಿಂದ ತುಂಬಿ ತುಳುಕುವುದನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಕೇಜ್ರಿವಾಲ್ ಸಮರ್ಥಿಸಿಕೊಂಡರು.

ADVERTISEMENT

'ಐವರು ಸದಸ್ಯರ ಸಮಿತಿಯು ಪರಿಸ್ಥಿತಿಯನ್ನು ಅವಲೋಕಿಸಿ ವರದಿ ಸಲ್ಲಿಸಿದೆ. ಜೂನ್ ಮಾಸಾಂತ್ಯದ ವೇಳೆಗೆ ಸೋಂಕಿತರ ಚಿಕಿತ್ಸೆಗಾಗಿ ದೆಹಲಿಯಲ್ಲಿ 15,000 ಬೆಡ್‌ಗಳು ಬೇಕಾಗಬಹುದು ಎಂದು ಸಮಿತಿ ಅಂದಾಜಿಸಿದೆ. ಪ್ರಸ್ತುತ ದೆಹಲಿಯಲ್ಲಿ 10,000 ಬೆಡ್‌ಗಳು ಲಭ್ಯವಿವೆ. ಇದರಲ್ಲಿ ಕೇಂದ್ರ ಸರ್ಕಾರದ ಆಸ್ಪತ್ರೆಗಳ ಬೆಡ್‌ಗಳೂ ಸೇರಿವೆ. ದೆಹಲಿಯ ಆಸ್ಪತ್ರೆಯ ಸೇವೆ ಸ್ಥಳೀಯರಿಗೆ ಮಾತ್ರ ಮೀಸಲಿರಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು' ಎಂದು ಕೇಜ್ರಿವಾಲ್ ಹೇಳಿದರು.

'ದೆಹಲಿಯ ಗಡಿಗಳನ್ನು ಮುಕ್ತಗೊಳಿಸುತ್ತಿದ್ದೇವೆ. ಮಾಲ್‌, ರೆಸ್ಟೊರೆಂಟ್‌ಗಳು ಸೋಮವಾರದಿಂದ ಕಾರ್ಯಾರಂಭ ಮಾಡಲಿವೆ. ಆದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದರೆ, ಹೋಟೆಲ್‌ಗಳು ಮತ್ತು ಕಲ್ಯಾಣ ಮಂಟಪಗಳಲ್ಲೂ ಬೆಡ್‌ಗಳನ್ನು ಹಾಕಿ, ಚಿಕಿತ್ಸೆ ಕೊಡಬೇಕಾದೀತು' ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.