ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ ಮಹಾ ಪ್ರಧಾನನಿರ್ದೇಶನಾಲಯದ ಜಾಗತಿಕ ನಾಯಕರು ಪುರಸ್ಕಾರಕ್ಕೆ ಪಾತ್ರರಾದ ಆಶಾ ಕಾರ್ಯಕರ್ತರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಆರೋಗ್ಯಕರ ಭಾರತದ ಖಾತ್ರಿಯಲ್ಲಿ ಆಶಾ ಕಾರ್ಯಕರ್ತರು ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ದಣಿವರಿಯದ ಪ್ರಯತ್ನ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಆರೋಗ್ಯ ವ್ಯವಸ್ಥೆಯ ನೇರ ಸಂಪರ್ಕಕ್ಕೆ ಬಹುಮುಖ್ಯ ಪಾತ್ರ ವಹಿಸಿದ ಹಿನ್ನೆಲೆಯಲ್ಲಿ ಭಾನುವಾರ ಭಾರತದ 10 ಲಕ್ಷಕ್ಕೂ ಹೆಚ್ಚು ಆಶಾ ಕಾರ್ಯಕರ್ತರನ್ನು ವಿಶ್ವಸಂಸ್ಥೆ ಗೌರವಿಸಿತ್ತು.
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, ‘ಆಶಾ ಕಾರ್ಯಕರ್ತರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶನಾಲಯದ ಜಾಗತಿಕ ಆರೋಗ್ಯ ನಾಯಕರ ಪ್ರಶಸ್ತಿ ಸಂದಿರುವುದು ಖುಷಿ ತಂದಿದೆ. ಎಲ್ಲಾ ಆಶಾ ಕಾರ್ಯಕರ್ತರಿಗೆ ಅಭಿನಂದನೆಗಳು.ಆರೋಗ್ಯಕರ ಭಾರತದ ಖಾತ್ರಿಯಲ್ಲಿ ಆಶಾ ಕಾರ್ಯಕರ್ತರು ಮುಂಚೂಣಿಯಲ್ಲಿದ್ದಾರೆ. ಅವರ ಸಮರ್ಪಣೆ ಮತ್ತು ದೃಢ ಕಾಯವು ಮೆಚ್ಚುಗೆಗೆ ಅರ್ಹ’ ಎಂದು ಹೇಳಿದ್ದಾರೆ.
‘ಆಶಾ ಎಂದರೆ ಹಿಂದಿಯಲ್ಲಿ ಭರವಸೆ ಎಂದರ್ಥ. ಈ ಆರೋಗ್ಯ ಕಾರ್ಯಕರ್ತರು, ಹಲವು ಸಾಂಕ್ರಾಮಿಕ ರೋಗಗಳಿಂದ ಮಕ್ಕಳನ್ನು ರಕ್ಷಿಸಲು ಲಸಿಕೆಯನ್ನು ನೀಡುತ್ತಾರೆ. ಸಮುದಾಯ ಆರೋಗ್ಯ, ಪೌಷ್ಟಿಕಾಂಶ, ನೈರ್ಮಲ್ಯೀಕರಣ ಸೇರಿದಂತೆ ಇನ್ನಿತರ ಆರೋಗ್ಯ ಸೇವೆಗಳನ್ನು ನೀಡುತ್ತಾರೆ. ಜೊತೆಗೆ ಜನರಲ್ಲಿ ಅರಿವು ಮೂಡಿಸುತ್ತಾರೆ’ ಎಂದು ಡಬ್ಲ್ಯುಎಚ್ಒ ಟ್ವೀಟ್ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.