ಗುವಾಹಟಿ: ಅಸ್ಸಾಂನ ಲಖಿಂಪುರ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ 20 ವರ್ಷದ ಯುವಕನೊಬ್ಬನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಆತ್ಮಹತ್ಯೆಯಲ್ಲ, ಮತಾಂತರಕ್ಕೆ ಸಂಬಂಧಿಸಿದ ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕೋಯಿಲಮಾರಿ ಬಲಿಜನ್ ಪ್ರದೇಶದ ಟೀ ತೋಟದ ಮರವೊಂದರಲ್ಲಿ 20 ವರ್ಷದ ಯುವಕ ಬಿಕಿ ಬಿಶಾಲ್ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವಕ ತನ್ನ ಗೆಳತಿಯನ್ನು ಮದುವೆಯಾಗಲು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಒತ್ತಡವಿತ್ತು. ಇದಕ್ಕೆ ಒಪ್ಪದ ಹಿನ್ನೆಲೆ ಕೊಲೆ ಮಾಡಲಾಗಿದೆ. ಯುವಕನ ದೇಹದಲ್ಲಿ ಹಲವು ಗಾಯಗಳು ಕಂಡುಬಂದಿವೆ ಎಂದು ಯುವಕನ ಕುಟುಂಬಸ್ಥರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ ಎಂದು ಐಎಎನ್ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಯುವಕನ ಸಾವಿಗೆ ಕಾರಣವೇನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ. ಮೃತನ ಗೆಳತಿಯ ತಂದೆ, ಅವರ ಇಬ್ಬರು ಸಂಬಂಧಿಕರು ಮತ್ತು ಸ್ಥಳೀಯ ಚರ್ಚ್ನಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಬಂಧಿತರು.
ಬಿಶಾಲ್ನನ್ನು ಆತನ ಗೆಳತಿಯ ಮನೆಯವರು ಸೆಪ್ಟೆಂಬರ್ 11ರಂದು ತಮ್ಮ ಮನೆಗೆ ಕರೆಯಿಸಿಕೊಂಡಿದ್ದರು. ಅಂದಿನಿಂದ ಬಿಶಾಲ್ ನಾಪತ್ತೆಯಾಗಿದ್ದ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಒಂದು ತಿಂಗಳ ಹಿಂದಷ್ಟೇ ಬಿಶಾಲ್ ಮತ್ತು ಆತನ ಗೆಳತಿ ಓಡಿ ಹೋಗಿದ್ದರು. ಇಬ್ಬರನ್ನು ಮದುವೆ ಮಾಡಿಸುವ ಪ್ರಸ್ತಾಪವಿತ್ತು. ಆದರೆ ಮದುವೆಯಾಗಲು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಬೇಕು ಎಂದು ಒತ್ತಡ ಹೇರಲಾಗಿತ್ತು. ಒಪ್ಪದೆ ಇದ್ದುದಕ್ಕೆ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.